ಬಳ್ಳಾರಿ: ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಆತ್ಮಹತ್ಯೆಯ ದಾರುಣ ಘಟನೆ ನಡೆದಿದೆ. ಬೆಳಗಾವಿ ಮೂಲದ ಸಿದ್ದಮ್ಮ (30) ಎಂಬ ಮಹಿಳೆ ತನ್ನ ಮಕ್ಕಳಾದ ಅಭಿಗ್ನ (8), ಅವಣಿ (6), ಆರ್ಯ (4) ಅವರನ್ನು ಕೃಷಿ ಹೊಂಡಕ್ಕೆ ತಳ್ಳಿ, ಬಳಿಕ ತಾನೂ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಕುಮಾರ್ ಜೊತೆ ಕುರಿ ಮೇಯಿಸಲು ಬರದನಹಳ್ಳಿಗೆ ಬಂದಿದ್ದ ಸಿದ್ದಮ್ಮ, ಅಲ್ಲಿ ಜಮೀನೊಂದರಲ್ಲಿ ಕುರಿ ಹಟ್ಟಿ ಹಾಕಿದ್ದರು.
ಜೂನ್ 17ರಂದು ಪತಿ-ಪತ್ನಿಯ ನಡುವೆ ಗಲಾಟೆ ನಡೆದಿದ್ದು, ಇದರಿಂದ ಮನನೊಂದಿದ್ದ ಸಿದ್ದಮ್ಮ ಈ ಭೀಕರ ಹೆಜ್ಜೆ ಇಟ್ಟಿದ್ದಾಳೆ. ಸಂಜೆಯವರೆಗೆ ಪತ್ನಿ, ಮಕ್ಕಳು ಹಾಗೂ ಕುರಿಗಳು ವಾಪಸ್ ಬರದೇ ಇದ್ದ ಕಾರಣ ಪತಿ ಹುಡುಕಾಟ ನಡೆಸಿ, ಕುರಿಗಳು ಹೊಂಡದ ಬಳಿ ನಿಂತಿರುವುದನ್ನು ನೋಡಿ ಶಂಕಿಸಿದನು. ಹೊಂಡದಲ್ಲಿ ಪರಿಶೀಲಿಸಿದಾಗ ನಾಲ್ವರು ಸಾವಿನ ದುರಂತ ಬೆಳಕಿಗೆ ಬಂದಿದೆ. ಸಿದ್ದಮ್ಮ ಸಹೋದರನ ದೂರಿನಂತೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.