ಬೆಂಗಳೂರು: ಬೆಂಗಳೂರು ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಜೂನ್ 15ರಂದು ಸಂಭವಿಸಿದ ಭೀಕರ ಘಟನೆ ಒಂದು ಯುವಕನ ಬಾಳನ್ನು ಕಿತ್ತುಕೊಂಡಿದೆ. ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ (29) ಇಂದು ಮಧ್ಯಾಹ್ನ 1 ಗಂಟೆಗೆ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಕ್ಷಯ್ ಮೆದುಳಿಗೆ ತೀವ್ರ ಪೆಟ್ಟು ಸಂಭವಿಸಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ 60 ಗಂಟೆಗಳ ನಂತರವೂ ಮೆದುಳು ಸ್ಪಂದಿಸದ ಕಾರಣ ವೈದ್ಯರು ‘ಮೆದುಳು ನಿಷ್ಕ್ರಿಯ’ ಎಂದು ಘೋಷಿಸಿದ್ದರು. ಕುಟುಂಬದವರು ಮೊಮ್ಮಗನ ಜೀವ ಉಳಿಸಲು ಮೃತುಂಜಯ ಹೋಮ ನೆರವೇರಿಸಿದರೂ, ವಿಧಿಯ ಆಟ ಬೇರೆ ಆಗಿತ್ತು. ಕೊನೆಗೆ ಕಾರ್ಡಿಯಾಕ್ ಅರೆಸ್ಟ್ನಿಂದ ಅಕ್ಷಯ್ ಸಾವನ್ನಪ್ಪಿದರು.
ತಂದೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಷಯ್ ಕುಟುಂಬದ ಪ್ರಮುಖ ಆಧಾರವಾಗಿದ್ದರು. ತಂದೆ ಆಸ್ಪತ್ರೆಗೆ ವ್ಹೀಲ್ಚೇರ್ನಲ್ಲಿ ಬಂದು ಮಗನನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಅಕ್ಷಯ್ ಸಾವನ್ನಪ್ಪಿದ ದುಃಖಕರ ಸ್ಥಿತಿಯು ಕುಟುಂಬಸ್ಥರನ್ನು ಆಘಾತಕ್ಕೊಳಪಡಿಸಿದೆ.
ಅಕ್ಷಯ್ ಸಾವಿಗೆ ಬಿಬಿಎಂಪಿಯ ನಿರ್ಲಕ್ಷ್ಯ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಆಸ್ಪತ್ರೆ ಬಳಿ ಭದ್ರತೆಗಾಗಿ ಕೆಎಸ್ಆರ್ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಕ್ಷಯ್ ಶ್ರೀನಿವಾಸನಗರದ ನಿವಾಸಿಯಾಗಿದ್ದು, ರಾಜಾಜಿನಗರದ ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.