ಬೆಂಗಳೂರು: ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ನಿಗದಿತ ಬ್ಯಾಂಕ್ ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ 2.57 ಕೋಟಿ ರೂ. ದೋಚಿ ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಿಟಾಚಿ ಕ್ಯಾಶ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕ ಮಲ್ಲಿಕಾರ್ಜುನ್ ಎಂಬವರು ನೀಡಿದ ದೂರಿನ ಮೇರೆಗೆ ಕಂಪನಿ ನೌಕರ ಸುಮನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಾ.25ರಂದು ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಫೆಡರಲ್ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ಮಲ್ಲಿಕಾರ್ಜುನ್ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆದುಕೊಂಡು ಹಿಟಾಚಿ ಕ್ಯಾಶ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೊಂದಿದ್ದು, ಈ ಕಂಪನಿ ಜತೆಗೆ ನೋಂದಣಿ ಮಾಡಿಕೊಂಡ ಗ್ರಾಹಕರಿಂದ ಹಣವನ್ನು ಸ್ವೀಕರಿಸಿ ನಿಗದಿತ ಬ್ಯಾಂಕ್ಗಳಿಗೆ ಪಾವತಿಸುವ ಕೆಲಸ ಮಾಡುತ್ತಿದ್ದಾರೆ. ನಗರದ ಮಾರ್ಗ ಸಂಖ್ಯೆ ಬಿಎಲ್ ಆರ್ 15ರಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಲು ಕಂಪನಿ ನೌಕರ ಸುಮನ್ ಎಂಬಾತನನ್ನು ನೇಮಿಸಲಾಗಿತ್ತು.
ಆರೋಪಿ, ತನ್ನ ಜತೆ ಇದ್ದ ಸಿಬ್ಬಂದಿ ಬೋಲನಾಥದಾಸ್ ಮತ್ತು ವಾಹನದ ಚಾಲಕ ಫಜಲ್ ಹುಸೇನ್ಗೆ ಕರೆ ಮಾಡಿ ನನ್ನ ಕುಟುಂಬದ ಸದಸ್ಯರೊಬ್ಬರು ಮೃಪಟ್ಟಿದ್ದಾರೆ. ನಾನು ಬ್ಯಾಂಕ್ಗೆ ಹಣ ಪಾವತಿಸಿ ಇಲ್ಲಿಂದಲೇ ಮನೆಗೆ ತೆರಳುತ್ತೇನೆ. ಈ ಬಗ್ಗೆ ನಾನು ಕಂಪನಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ. ನೀವು ವಾಹನ ತೆಗೆದುಕೊಂಡು ತೆರಳಿ ಎಂದು ತಿಳಿಸಿದ್ದಾನೆ. ಕಂಪನಿಯಲ್ಲಿ ಸುಮನ್ ಬಗ್ಗೆ ವಿಚಾರಿಸಿದಾಗ ಆತ ಸುಳ್ಳು ಹೇಳಿ ಹಣದೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ.