ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಬಳಿಯ ಮೇಲುಕಮನಹಳ್ಳಿ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಬೈಕ್ ಸವಾರ ಬಂಡೀಪುರದ ಸಫಾರಿ ವಾಹನದ ಚಾಲಕ ಆನಂದ್(೩೫) ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಸಫಾರಿ ಕೇಂದ್ರದಿಂದ ಊಟ ತರಲೆಂದು ಬೈಕ್ನಲ್ಲಿ ತೆರಳಿದ್ದಾಗ ಮೇಲುಕಮನಹಳ್ಳಿಯ ಇಬ್ಬರು ಮತ್ತೊಂದು ಬೈಕ್ನಲ್ಲಿ ವೇಗವಾಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆನಂದ್ ರಸ್ತೆಗೆ ಉರುಳಿ ಬಿದ್ದಾಗ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ನವೀನ್ ಮತ್ತು ಕುಮಾರ್ ಎಂಬುವವರಿಗೆ ತೀವ್ರ ಗಾಯವಾಗಿ ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಆನಂದ್ ಅಂತ್ಯಸಂಸ್ಕಾರ ತಾಲ್ಲೂಕಿನ ಕೆಲಸೂರು ಗ್ರಾಮದಲ್ಲಿ ನೆರವೇರಿತು. ಮೃತ ಆನಂದ್ಗೆ ಪತ್ನಿ ಇಬ್ಬರು ಪುಟ್ಟ ಮಕ್ಕಳಿದ್ದು ಸಹೋದರ ಕುಮಾರ್ ಪೊಲೀಸ್ ಇಲಾಖೆಯಲ್ಲಿದ್ದಾರೆ. ಅಂತ್ಯಸಂಸ್ಕಾರದ ವೇಳೆ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.