ಬೆಂಗಳೂರು : ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಶಾಂತಿ ನೆಲಸಬೇಕೆಂಬುದು ಕಾಂಗ್ರೆಸ್ಸಿನ ಉದ್ದೇಶ. ಆದರೆ ಬಿಜೆಪಿಯವರು ಎಲ್ಲಾ ಕಡೆ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದಿಗಾರರೊಂದಿಗೆ ಮಾತನಾಡಿ, ತಾವು ಇಂದು ಬಳ್ಳಾರಿಗೆ ಭೇಟಿ ನೀಡುತ್ತಿದ್ದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು. ಗುಂಡೇಟಿನಿಂದ ಮೃತಪಟ್ಟ ರಾಜಶೇಖರ್ ಕುಟುಂಬಕ್ಕೆ ವಸತಿ ಸಚಿವ ಜಮೀರ್ ಅಹದ್ಖಾನ್ ನೀಡಿರುವ 25 ಲಕ್ಷ ಹಣಕ್ಕೆ ಬಿಜೆಪಿ ನಾಯಕರು, ಮತ್ತು ಜೆಡಿಎಸ್ ನಾಯಕರಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಲೆಕ್ಕ ಕೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದರು.
ಈ ಬಗ್ಗೆ ಸಚಿವ ಜಮೀರ್ ಅವರೊಂದಿಗೆ ನಾವು ಚರ್ಚಿಸುವುದಾಗಿ ಹೇಳಿದ ಅವರು ಆದಾಯ ತೆರಿಗೆ ಇಲಾಖೆ ಸೇರಿದಂತೆ ಎಲ್ಲವೂ ಕುಮಾರಸ್ವಾಮಿ ಅವರ ಜೇಬಿನಲ್ಲೇ ಇದೆ. ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಅವರೇ ಪ್ರಶ್ನಿಸುವ ಅಗತ್ಯ ಏನಿದೆ ಎಂದು ಡಿ.ಕೆ.ಶಿವಕುಮಾರ್ ಕೇಳಿದರು.
ಈ ವೇಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಶೀಘ್ರ ಚೇತರಿಸಿಕೊಳ್ಳಲಿ. ಪಕ್ಷದ ಬೆಳವಣಿಗೆ ಅವರ ಮಾರ್ಗದರ್ಶನ, ಸಲಹೆ, ಸೂಚನೆಗಳು ಅಗತ್ಯ ಇದೆ ಎಂದರು.
ಇನ್ನೂ ಸೋನಿಯಾ ಗಾಂಧಿಯವರ ಅನಾರೋಗ್ಯದ ಬಗ್ಗೆ ತಮಗೆ ಅಧಿಕೃತವಾದ ಮಾಹಿತಿ ಇಲ್ಲ. ಆದರೆ ಅನ್ಯರ ಮೂಲಕ ನನಗೆ ವಿಷಯ ತಿಳಿದು ಬಂದಿದೆ. ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಸೋನಿಯಾ ಗಾಂಧಿಯವರು ದೃಢವಾಗಿ ನಿಂತಿದ್ದರು. ಎಲ್ಲ ತೊಂದರೆಗಳ ಸಂದರ್ಭದಲ್ಲಿ ರಕ್ಷಕರಾಗಿ ಕೆಲಸ ಮಾಡಿದ್ದಾರೆ. ಅವರು ನಮ ಪಕ್ಷದ ಶಕ್ತಿ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿದೆ ಎಂದು ತಿಳಿಸಿದರು.



