ಬೆಂಗಳೂರು: ಶಾಸಕರೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹165 ಕೋಟಿ ಮೌಲ್ಯದ 26 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಮಾಡಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ದಾಖಲೆ ಸಮೇತ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಈ ಅಕ್ರಮದೊಂದಿಗೆ ಸಂಬಂಧವಿರುವಂತೆ ಶಾಸಕ, ಅವರ ಧರ್ಮಪತ್ನಿ, ಮಾಜಿ ಸಚಿವರ ಆರು ಆಪ್ತರು ಸೇರಿ ಒಂಬತ್ತು ಮಂದಿ ಸೇರಿದಂತೆ ಒಟ್ಟು ಹದಿನೈದು ಮಂದಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಈ ಅಕ್ರಮಕ್ಕೆ ಸಹಕಾರ ನೀಡಿದ ಕುರುಬರಹಳ್ಳಿಯ ರಾಜಸ್ವ ನಿರೀಕ್ಷಕ ಮೋನಿಷ್, ಗ್ರಾಮ ಲೆಕ್ಕಿಗ ನಂಜೇಗೌಡ, ವಿಶೇಷ ತಹಸೀಲ್ದಾರ್ ಕೃಷ್ಣಮೂರ್ತಿ ಮತ್ತು ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ವಿರುದ್ಧವೂ ದೂರು ದಾಖಲಿಸಲಾಗಿದೆ.
ಮಾಜಿ ಸಚಿವರ ಆಪ್ತರಾದ ರಂಗಮ್ಮ, ವೆಂಕಟಮ್ಮ, ಬಿ.ವಿ. ಚಂದರ್ ರಾವ್, ಬಿ.ವಿ. ಮನೋಹರ್ ಬಾಬಡೆ, ಶಿವಣ್ಣ ಮತ್ತು ಅಬ್ದುಲ್ ಸತ್ತರ್ ಸೇರಿ ಆರು ಮಂದಿಯು ಯಶವಂತಪುರ ವ್ಯಾಪ್ತಿಯ ಸುಮಾರು ₹800 ಕೋಟಿ ಮೌಲ್ಯದ 130.29 ಎಕರೆ ವಿಸ್ತೀರ್ಣದ ಗೋಮಾಳವನ್ನು ಕಬಳಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ.
ನಿಯಮದಂತೆ 15 ವರ್ಷಗಳ ಒಳಗಾಗಿ ಮಂಜೂರಾತಿ ಜಮೀನು ಮಾರಾಟ ಮಾಡುವಂತಿಲ್ಲ ಹಾಗೂ ಮಾರಾಟಕ್ಕೆ ಕಂದಾಯ ಇಲಾಖೆಯ ಅನುಮತಿ ಅಗತ್ಯ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಮಾಜಿ ಸಚಿವರ ಆಪ್ತರಾಗಿರುವ ರಂಗಮ್ಮ, ವೆಂಕಟಮ್ಮ, ಬಿ. ವಿ. ಚಂದರ್ ರಾವ್, ಬಿ. ವಿ. ಮನೋಹರ್ ಬಾಬಡೆ, ಶಿವಣ್ಣ ಮತ್ತು ಅಬ್ದುಲ್ ಸತ್ತರ್ ಅವರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಮಾನ್ಯ ಕಂದಾಯ ಸಚಿವರನ್ನು ರಮೇಶ್ ಆಗ್ರಹಿಸಿದ್ದಾರೆ.