ಬೆಂಗಳೂರು: ಬೆಂಗಳೂರು ನಗರದ ಕೋರಮಂಗಲದಲ್ಲಿನ ಪಾಸ್ಪೋರ್ಟ್ ಕಚೇರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಾಂಬ್ ಇಟ್ಟು ಸ್ಫೋಟ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಘಟನೆ ಆತಂಕ ಸೃಷ್ಟಿಸಿದೆ. ಇ-ಮೇಲ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ಮಾಡುವುದಾಗಿ ಸೂಚಿಸಲಾಗಿದ್ದು, ಕೂಡಲೇ ಬಾಂಬ್ ನಿಗ್ರಹ ದಳ ಹಾಗೂ ಕೋರಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
ಬೆದರಿಕೆ ಸಂದೇಶದಲ್ಲಿ ಏನಿತ್ತು?
ಇದು ಇಸ್ಲಾಂ ಧರ್ಮದ ಪವಿತ್ರ ದುಲ್ ಹಜ್ ದಿನವಾಗಿದ್ದು, ಅಮೋನಿಯಮ್ ಸಲ್ಫರ್ಬೇಸ್ಡ್ ಐಇಡಿ ಬಳಸಿ ಸ್ಫೋಟ ನಡೆಸಲಾಗುವುದು ಎಂದು ಹೇಳಲಾಗಿದೆ. “ಸವುಕ್ಕು ಶಂಕರ್ ಮತ್ತು ಕಸಬ್ಗೆ ಗಲ್ಲು ಶಿಕ್ಷೆ ನೀಡಿದ ಪ್ರತಿಕಾರವಾಗಿ ಈ ದಾಳಿ ನಡೆಯಲಿದೆ” ಎಂಬ ಅಂಶ ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.