ಮಂಗಳೂರು: ಇಂಡಿಯಾ ಒಕ್ಕೂಟವನ್ನು ಒಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಪಟ್ಟಿದ್ದು, ಇ.ಡಿ, ಸಿಬಿಐ ಹಾಗೂ ಐಟಿ ಮೂಲಕ ಬೆದರಿಸಿದೆ. ಆದರೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನರೇಂದ್ರ ಮೋದಿಯನ್ನು ಕಿತ್ತೊಗೆಯುವುದೇ ನಮ್ಮೆಲ್ಲರ ಗುರಿ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಮಂಗಳೂರಿನಲ್ಲಿ ಇಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಾಂಡ್ ಮೂಲಕ ಏಳು ಸಾವಿರ ಕೋಟಿ ಭ್ರಷ್ಟಾಚಾರವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಜನ ಇದನ್ನೆಲ್ಲ ನೋಡಿದ್ದಾರೆ. ಮೋದಿ ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಇಂಡಿಯಾ ಒಕ್ಕೂಟದಲ್ಲಿ ಇರುವವರು ಬಿಜೆಪಿಯನ್ನು ಮನೆಗೆ ಕಳುಹಿಸಬೇಕು ಎಂದು ಒಗ್ಗಟ್ಟಾಗಿದ್ದಾರೆ. ಚುನಾವಣಾ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡಲಿದೆ. ಈ ಬಾರಿ ೨೦೦ ಸೀಟುಗಳಿಗಿಂತ ಕೆಳಗಡೆ ಬಿಜೆಪಿ ಇಳಿಯುತ್ತದೆ. ಬಿಜೆಪಿಯನ್ನು ನಾವೆಲ್ಲ ಒಗ್ಗಟ್ಟಾಗಿ ಸೋಲಿಸುತ್ತೇವೆ. ಇದು ನಮ್ಮ ಗ್ಯಾರಂಟಿ ಎಂದು ಹೇಳಿದರು.
ಜನಸಾಮಾನ್ಯರಿಗೆ ಮೋದಿ ಮೋಸ ಅರ್ಥವಾಗಿದೆ. ಬಿಜೆಪಿ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಬಿಜೆಪಿಯವರು ಯಾವಾಗಲು ತಿರುಕನ ಕನಸು ಕಾಣುತ್ತಾರೆ. ದೇಶದ ಜನತೆ ಮೋದಿ ಆಡಳಿತದಿಂದ ರೋಸಿ ಹೋಗಿದ್ದಾರೆ. ಫಲಿತಾಂಶ ನೀವೇ ನೋಡಿ ಎಂದು ಹೇಳಿದರು.