ಮೈಸೂರು : ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮುಂಬಡ್ತಿ ಪಡೆಯಲು ಕೋಟ್ಯಂತರ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದು, ದೂರಿನಲ್ಲಿ, ಸುಮಾರು ರೂ. 9 ಕೋಟಿಗೂ ಹೆಚ್ಚು ಹಣವನ್ನು ಐದು ಚೀಲಗಳಲ್ಲಿ ಸಾಗಿಸಲಾಗಿತ್ತು ಎಂದು ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದಾರೆ.
ಒಂದು ಚೀಲದಲ್ಲಿದ್ದ ರೂ. 1.60 ಕೋಟಿ ಹಣವನ್ನು ಹಿರಿಯ ಐಎಎಸ್ ಅಧಿಕಾರಿಗೆ ಸಂಬಂಧಿಸಿದ ವ್ಯಕ್ತಿಗೆ ಲಂಚವಾಗಿ ನೀಡಲಾಗಿದೆ. ಈ ಹಣ ಮಾಜಿ MUDA ಆಯುಕ್ತರದ್ದೇ ಎಂದು ದೂರಿದ್ದು, ಈ ಪ್ರಕರಣದಲ್ಲಿ ಬಳಸಲಾದ ಕಾರಿನ ಮಾಲೀಕ ಹಾಗೂ ಚಾಲಕರ ಬಗ್ಗೆ ತನಿಖೆ ನಡೆಸಬೇಕು, ಹಣದ ಮೂಲ ಮತ್ತು ಹಂಚಿಕೆಯ ಬಗ್ಗೆ ಪತ್ತೆಹಚ್ಚಬೇಕು, ಹಣವನ್ನು ನಗದು ಅಥವಾ ಆನ್ಲೈನ್ ಮೂಲಕ ಪಾವತಿಸಿರುವುದನ್ನು ಪರಿಶೀಲಿಸಬೇಕು, ಟವರ್ ಲೊಕೇಶನ್ ಮತ್ತು ಕರೆ ವಿವರ ದಾಖಲೆಗಳನ್ನು (WhatsApp ಕರೆಗಳು ಸೇರಿದಂತೆ) ಸಂಗ್ರಹಿಸಬೇಕು ಹಾಗೂ ವಾಹನದ GPS ಡೇಟಾ ಹಾಗೂ ಸಂಬಂಧಿತ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಈ ಆರೋಪಗಳು ಆಧಾರ ರಹಿತವಾಗಿದ್ದು ಯಾವುದೇ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಸ್ನೇಹಮಯಿ ಕೃಷ್ಣ ಅವರಿಗೆ ವಿವರವಾದ ಲಿಖಿತ ಸ್ಪಷ್ಟೀಕರಣವನ್ನು ಕಳುಹಿಸಿದ್ದಾರೆ.



