ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಗೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಗ್ರಾಮದ ಸೌಮ್ಯ ಕೋಂ ಶ್ರೀನಿವಾಸ್ ಶೆಟ್ಟಿ ಎಂಬುವರಿಗೆ ಸೇರಿದ ಕರು ಆಗಿದ್ದು, ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನ ಕೊಟ್ಟಿಗೆ ಬಳಿ ಹಸು ಕರುಗಳನ್ನು ಎಂದಿನಂತೆ ಕಟ್ಟಿ ಹಾಕಿದ್ದಾರೆ. ತಡರಾತ್ರಿ ಸಂದರ್ಭದಲ್ಲಿ ದಾಳಿ ಮಾಡಿರುವ ಚಿರತೆಯು ಸುಮಾರು ಎರಡು ವರ್ಷದ ಹೆಣ್ಣು ಕರುವನ್ನು ಕೊಟ್ಟಿಗೆ ಬಳಿಯಿಂದ ಎಳೆದೊಯ್ದು, ಸ್ವಲ್ಪ ದೂರದ ಬಳಿಕ ಕೊಂದು ಹಾಕಿದೆ. ಮಂಗಳವಾರ ಬೆಳಿಗ್ಗೆ ಅಂಬಲಾರೆ ಪಶು ಆರೋಗ್ಯ ಕೇಂದ್ರದ ಪಶುವೈದ್ಯಧಿಕಾರಿ ಡಾ.ಹರ್ಷಿತಾ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ನಾವು ಕಡುಬಡವರು ಆಗಿದ್ದು, ಕೃಷಿ ಹಾಗೂ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದೇವೆ. ಕರು ಚಿರತೆ ದಾಳಿಗೆ ಒಳಗಾಗಿರುವುದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಸಂಬಂಧ ಇಲಾಖೆಯವರು ನಮಗೆ ಪರಿಹಾರ ನೀಡಬೇಕು ಅಲ್ಲದೆ ಈ ಭಾಗದಲ್ಲಿ ಭಯ ಸೃಷ್ಟಿ ಮಾಡಿರುವ ಚಿರತೆ ಸೆರೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೌಮ್ಯ ಮನವಿ ಮಾಡಿದ್ದಾರೆ.