ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯದ ವತಿಯಿಂದ ಜೂ,೯ ರಂದು ಬೆಂಗಳೂರಿನಲ್ಲಿ ಏರ್ಪಡಿಸಿರುವ ಮಾದಿಗ ಕ್ರಾಂತಿಕಾರಿ ಸಂಘರ್ಷ ಸಮಾವೇಶಕ್ಕೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಂದ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಸಮಾಜದ ಮುಖಂಡ ಎಂ.ಎಸ್.ಮಹದೇವ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆಯಲಾಗಿದ್ದ ಸಮುದಾಯದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದಿರುವ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕೆಂಬ ಕೂಗು ಕಳೆದ ೩ ದಶಕಗಳಿಂದ ಕೇಳಿ ಬರುತ್ತಿದ್ದು ಇಂದು ಅಂತಿಮ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.
ಹಿಂದೆ ನಿವೃತ್ತಾ ನ್ಯಾಯಮೂರ್ತಿ ಸದಾಶಿವ ಆಯೋಗದ ರಚನೆ ಮಾಡಿದ್ದ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯದ ಸಮೀಕ್ಷೆ ನಡೆಸಿತ್ತು ಅದನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಅನೇಕ ಹೋರಾಟಗಳು ನಡೆಸಿದೆವು ಆದರೇ ಕೆಲವು ಪ್ರಬಲರು ವಿರೋಧಿಸಿಕೊಂಡು ಬಂದ್ದರಿಂದ ಹಿನ್ನಡೆಯಾಗಿತ್ತು ಈ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ಸಮುದಾಯದ ಹೋರಾಟಕ್ಕೆ ಬಲ ಬಂದಿದೆ ಎಂದರು.
ಪರಿಶಿಷ್ಟ ಸಮುದಾಯದ ೧೦೧ ಜಾತಿಗಳಲ್ಲಿ ಬರುವ ಕೆಲವು ಗೊಂದಲಗಳನ್ನು ಬಗೆ ಹರಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ರವರ ನೇತೃತ್ವದ ಏಕ ಸದಸ್ಯ ಆಯೋಗವನ್ನು ಸರ್ಕಾರ ರಚಿಸಿ ಈಗಾಗಲೇ ಸರ್ವೇ ಕಾರ್ಯ ಮುಗಿದು ಕೊನೆಯ ಹಂತದಲ್ಲಿದೆ. ಈ ಬಗ್ಗೆ ಸಮುದಾಯದವರಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಜನಾಂಗದ ಮುಖಂಡರು ರಾಜ್ಯದಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಮತ್ತು ಪಾದಯಾತ್ರೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಒಳ ಮೀಸಲಾತಿಯನ್ನು ಶೀಘ್ರವಾಗಿ ಜಾರಿಮಾಡಬೇಕು ಹಾಗೂ ಅಲ್ಲಿಯವರೆಗೆ ಸರ್ಕಾರ ಯಾವುದೇ ನೇಮಕಾತಿ ಮತ್ತು ಬಡ್ತಿ ಮೀಸಲಾತಿ ನೀಡಬಾರದು ಎಂದು ಒತ್ತಾಯಿಸಿ ಜೂ,೯ ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿರುವ ಮಾದಿಗರ ಕ್ರಾಂತಿಕಾರಿ ಸಂಘರ್ಷ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಮಾಜದ ಮುಖಂಡರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಎರಡು ತಾಲೂಕುಗಳಿಂದ ಸಮಾವೇಶಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಸಮಾಜದ ಬಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವ ಮೂಲಕ ಮಾದಿಗ ಸಮುದಾಯದ ಹಲವು ವರ್ಷಗಳ ಒಳ ಮೀಸಲಾತಿ ಕನಸ್ಸನ್ನ ನನಸು ಮಾಡಿಕೊಳ್ಳೋಣ ಎಂದು ಮನವಿ ಮಾಡಿದರು.
ಸಭೆಯನ್ನು ಉದ್ದೇಶಿಸಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್.ಮಲ್ಲೇಶ್, ಜಿಲ್ಲಾ ಸಂಚಾಲಕ ಬಿ.ಮಂಜುನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ಖಜಾಂಚಿ ಹೆಚ್.ಎಂ.ಮಂಜು, ಮುಖಂಡರಾದ ಕೆಂಪಯ್ಯ, ಡಾ.ದಾಸ್ ಪ್ರಕಾಶ್, ರಾಜೇಶ್, ಈರಯ್ಯ, ಪರಶುರಾಮ್, ಹೆಚ್.ಎಸ್.ಮಹದೇವ್, ಎಂ.ಚಲುವರಾಜ್, ಮುರುಗೇಶ್, ಕೃಷ್ಣಯ್ಯ, ರಮೇಶ್, ತಿರುಮಲ, ಪುಟ್ಟಸ್ವಾಮಿ, ಮಹದೇವ್, ವಜ್ರೇಶ್ ಸೇರಿದಂತೆ ಇನ್ನಿತರರು ಇದ್ದರು.