ಬೆಂಗಳೂರು: ಬೆಂಗಳೂರು ಚಾಮರಾಜಪೇಟೆ ಪೊಲೀಸರು 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ ಕೇರ್ ಟೇಕರ್ ಮಹಿಳೆ ಉಮಾಳನ್ನು ಬಂಧಿಸಿದ್ದಾರೆ. ಚಾಮರಾಜಪೇಟೆ ಮೂಲದ ಉದ್ಯಮಿ ರಾಧ ಅವರು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ದೂರುದಾರೆ ರಾಧ ಅವರ ಅಕ್ಕ ಸುಜಾತ ಅಸ್ವಸ್ಥರಾಗಿದ್ದ ಕಾರಣ, ಉಮಾ ಎಂಬ ಮಹಿಳೆಯನ್ನು ಮೂರು ತಿಂಗಳ ಹಿಂದೆ ಕೇರ್ ಟೇಕರ್ ಆಗಿ ನೇಮಕ ಮಾಡಲಾಗಿತ್ತು. ಮನೆಯ ಬೀರುವಿನಲ್ಲಿ ಸುಜಾತ ಅವರು ಸೈಟ್ ಮಾರಾಟದಿಂದ ಬಂದ 67 ಲಕ್ಷ ನಗದು ಮತ್ತು 95 ಲಕ್ಷ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು.
ಜೂನ್ 9 ರಂದು ಮನೆಯ ಬೀರು ತೆರೆಯುತ್ತಿದ್ದಾಗ ಹಣ ಮತ್ತು ಆಭರಣಗಳಿಲ್ಲದಿರುವುದು ಕಂಡುಬಂದಿತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಜೂನ್ 4 ರಂದು ಬೆಳಿಗ್ಗೆ ಉಮಾ ಒಂದು ಬ್ಯಾಗ್ ತೆಗೆದುಕೊಂಡು ಹೊರಡುವುದು ಹಾಗೂ ಸಂಜೆ ಮನೆಗೆ ಮರಳುವ ದೃಶ್ಯ ಸೆರೆಯಾಗಿತ್ತು. ಅನುಮಾನ ಹೊತ್ತ ದೂರುದಾರೆ ಉಮಾಳ ವಿರುದ್ಧ ದೂರು ನೀಡಿದರು.
ಪೊಲೀಸರು ಉಮಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಅಪರಾಧವನ್ನು ಒಪ್ಪಿಕೊಂಡು ತನ್ನ ಮಗಳ ಮನೆಯಲ್ಲಿ ಭಾಗದ ಚಿನ್ನಾಭರಣ ಮತ್ತು ನಗದು ಇಡಲಾಗಿದೆ ಎಂದು ತಿಳಿಸಿದ್ದಾಳೆ. ಸುಮಾರು 60 ಲಕ್ಷ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣಗಾಗಿ ತನಿಖೆ ಮುಂದುವರಿದಿದೆ.