ವರದಿ :ಸ್ಟೀಫನ್ ಜೇಮ್ಸ್
ಬೆಳಗಾವಿ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನಲ್ ನ ಒಟ್ಟು 13 ಜನ ಜಯಸಾಧಿಸಿದ್ದು, ಬ್ಯಾಂಕ್ ಅನ್ನು ಮಾದರಿಯಾಗಿ ನಡೆಸಲಿ ಎಂದು ಆಶಿಸುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೆ ಇಂದಿನಿಂದ ಅದು ಮುಗಿದು ಅಧ್ಯಾಯ. ಇನ್ನು ಹೊಸದಾಗಿ ಆಯ್ಕೆಯಾದ ನಿರ್ದೇಶಕರು ರೈತರಪರ ಕೆಲಸ ಮಾಡಲಿ, ಸರ್ಕಾರದಿಂದ ಬೇಕಾದ ಸಹಕಾರವನ್ನು ನೀಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬ್ಯಾಂಕ್ ಬೇಕಾದ ಸಲಹೆ, ಸಹಕಾರ ಸದಾ ನೀಡುತ್ತೇನೆಂದು ಇದೇ ವೇಳೆ ತಿಳಿಸಿದರು.
ಈ ಚುನಾವಣೆಯಲ್ಲಿ ಸಾಕಷ್ಟು ನಮ್ಮ ಬಗ್ಗೆ ಅಪಪ್ರಚಾರ ಮಾಡಿದರೂ, ಆದರೆ ಜನರ ಆಶೀರ್ವಾದದಿಂದ ನಮಗೆ ಅಧಿಕಾರ ದೊರೆತಿದೆ. ಇನ್ನು ಅನಾವಶ್ಯಕ ಆರೋಪ ಮಾಡುವವರು ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ಶಾಸಕ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಲಕ್ಷ್ಮಣ ಸವದಿ ಅವರ ಹೇಳಿಕೆಗೆ ಆದ್ಯತೆ ನೀಡುವ ಅವಶ್ಯಕತೆ ಇಲ್ಲ. ಈಗಾಗಲೇ ನಮಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮಾಡಲು ಜನರು ಬಹುಮತ ನೀಡಿದ್ದಾರೆ. ಇಂದು ಕೂಡ ನಮ್ಮ ನಿರ್ದೇಶಕರೊಂದಿಗೆ ಚರ್ಚಿಸಿದ್ದಾರೆ. ಆದರೆ ಅವರು ಇದರಲ್ಲಿ ಸಕ್ಸೆಸ್ ಆಗಲ್ಲ. ಇನ್ನು ರಾಮದುರ್ಗದಲ್ಲಿ ಅಶೋಕ ಪಟ್ಟಣ ಗೆಲ್ಲುತ್ತಿದ್ದರು. ಆದರೆ ಅವರೇ ಸ್ಪರ್ಧೆಯಿಂದ ಹಿಂದೇಟು ಹಾಕಿದ್ದಾರೆ ಎಂದರು.
ರಮೇಶ ಕತ್ತಿ ಹಳೆ ಪ್ರಕರಣ ಬಗ್ಗೆ ದೂರು ನೀಡಿರುವ ಬಗ್ಗೆ ಮಾತನಾಡಿ, ರಮೇಶ ಕತ್ತಿ ಅವರು ಮುಗಿದ ಹೋದ ಪ್ರಕರಣ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕುರಿತು ಅವರು ಎಲ್ಲಿಯಾದರೂ ದೂರು ನೀಡಲಿ, ಅದಕ್ಕೆ ಕಾನೂನು ಪ್ರಕಾರ ಉತ್ತರಿಸುತ್ತೇನೆಂದು ತಿಳಿಸಿದ ಸಚಿವರು, ರಮೇಶ ಕತ್ತಿ ಅವರು ಎಸ್ಟಿ ಸಮಾಜದ ಬಗ್ಗೆ ಅವಾಚ್ಚ ಶಬ್ದ ಬಳಸಿದ್ದರ ಬಗ್ಗೆ ಮಾತನಾಡಿ, ಈ ಕುರಿತು ಸಮಾಜದ ಮುಖಂಡರು ಈಗಾಗಲೇ ದೂರು ನೀಡುತ್ತಿದ್ದಾರೆಂದು ತಿಳಿಸಿದರು.



