ಯಳಂದೂರು: ತ್ಯಾಗ ಹಾಗೂ ಬಲಿದಾನಗಳ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಶನಿವಾರ ಮುಸ್ಲಿಮರು ಸಂಭ್ರಮ ಸಡಗರಗಳಿಂದ ಆಚರಿಸಿದರು.
ಯಳಂದೂರು ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮುಂಜಾನೆಯ ಪ್ರಾರ್ಥನೆಯೊಂದಿಗೆ ಹಬ್ಬದ ಸಡಗರ ಕಳೆಕಟ್ಟಿತ್ತು. ಬೆಳಿಗ್ಗೆ ೮.೩೦ ಕ್ಕೆ ಮಸೀದಿಯ ಮುಂಭಾಗ ಇಡೀ ಪಟ್ಟಣದ ಮುಸಲ್ಮಾನರು ಒಂದೆಡೆ ಸೇರಿ ದೇವರ ನಾಮಗಳನ್ನು ಹಾಡುತ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಒಟ್ಟಾಗಿ ಸೇರಿದರು. ೯.೦೦ ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮೆಕ್ಕಾದಲ್ಲಿ ಹಜ್ ಸಂಪನ್ನಗೊಂಡ ಮಾರನೇ ದಿನ ಎಲ್ಲೆಡೆ ಬಕ್ರೀದ್ ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಮುಸ್ಲಿಂ ಧರ್ಮಗುರುಗಳು ಹಬ್ಬದ ಧಾರ್ಮಿಕ ವಿಧಿಗಳು, ಇದರ ಮಹತ್ವದ ಬಗ್ಗೆ ಪ್ರವಚನ ನೀಡಿದರು. ನಂತರ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಂಡಿತು. ಬಣ್ಣಬಣ್ಣದ ಪೋಷಾಕುಗಳನ್ನು ಧರಿಸಿದ ಚಿಣ್ಣರು ಗಮನ ಸೆಳೆದರು. ಪರಸ್ಪರರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಜಾನುವಾರುಗಳನ್ನು ಬಲಿಕೊಟ್ಟು ಇದರ ಮಾಂಸವನ್ನು ಹಂಚುವ ಮೂಲಕ ಹಬ್ಬ ಸಂಪನ್ನಗೊಂಡಿತು.
ಮೆರವಣಿಗೆಯ ಸಂದರ್ಭದಲ್ಲಿ ಸಿಪಿಐ ಕೆ. ಶ್ರೀಕಾಂತ್ ಹಾಗೂ ಪಿಎಸ್ಐ ಆಕಾಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿವಿಧೆಡೆ ಸಂಭ್ರಮದ ಈದ್ ಆಚರಣೆ: ತಾಲೂಕಿನ ಮಾಂಬಳ್ಳಿ, ಯರಗಂಬಳ್ಳಿ, ಗುಂಬಳ್ಳಿ, ಯರಿಯೂರು ಸಮೀಪದ ಇರಸವಾಡಿ, ಹೊಂಗನೂರು, ಮಸಣಾಪುರ, ಚಾಟೀಪುರ ಗ್ರಾಮಗಳಲ್ಲೂ ಈದ್ ಉಲ್ ಅದಾ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಇದಕ್ಕಾಗಿ ಈದ್ಗಾ ಮೈದಾನದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.