ಬೆಂಗಳೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟಿರುವ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಸಂಪ್ರದಾಯಗಳನ್ನ ಅವಮಾನಿಸುವ ಕೆಲಸವನ್ನ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮನಸ್ಥಿತಿಯಲ್ಲಿ ಸಮಸ್ಯೆ ಇದೆ
ಮಾಧ್ಯಮಗಳ ಜೊತೆ ಈ ವಿಚಾರವಾಗಿ ಮಾತನಾಡಿದ ಅವರು, ಸಮಸ್ಯೆ ನಮ್ಮ ಬಿಜೆಪಿಯಲ್ಲಿ ಇಲ್ಲ. ಸಮಸ್ಯೆ ಇರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಮಸ್ಯೆಯಲ್ಲಿದೆ. ಇತ್ತೀಚೆಗೆ, ಚಾಮುಂಡಿ ಬೆಟ್ಟದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಕೇವಲ ಡಿಕೆ ಶಿವಕುಮಾರ್ ಮಾತ್ರವಲ್ಲದೇ, ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರು ಕೊಡುತ್ತಿರುವ ಹೇಳಿಕೆಗಳನ್ನ ಸಹ ನಾನು ನೋಡಿದ್ದೇನೆ. ಅವರುಗಳು ಪದೇ ಪದೇ ಹಿಂದೂ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಅವಮಾನ ಮಾಡುವ ರೀತಿ ಹೇಳಿಕ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೀಪಾ ಬಸ್ತಿ ಅವರನ್ನ ಏಕೆ ಆಹ್ವಾನಿಸಿಲ್ಲ?
ಇದಿಷ್ಟೇ ಅಲ್ಲದೇ, ದಸರಾ ಉದ್ಘಾಟನೆ ಸಂಬಂಧಿಸಿದಂತೆ ಸಹ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಅವರ ಹೇಳಿಕೆಗಳಾಗಲಿ ಅಥವಾ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಸಿದ್ದರಾಮಯ್ಯ ಅವರು ಆಹ್ವಾನ ನೀಡಿರುವುದಾಗಲಿ, ಎಲ್ಲವನ್ನೂ ಗಮನಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಅವರನ್ನ ಮಾತ್ರ ಆಹ್ವಾನಿಸಿದ್ದು ಏಕೆ?, ಅವರ ಜೊತೆ ದೀಪಾ ಬಸ್ತಿ ಅವರನ್ನ ಆಹ್ವಾನಿಸುವ ಅಲೋಚನೆ ಏಕೆ ಮಾಡಿಲ್ಲ? ಬೂಕರ್ ಪ್ರಶಸ್ತಿ ಬಂದಿದ್ದು ಬಹಳ ಸಂತೋಷದ ವಿಚಾರ, ನಾವು ಸಹ ಸಂತೋಷಪಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ಇಬ್ಬರನ್ನೂ ಏಕೆ ಆಹ್ವಾನ ಮಾಡಿಲ್ಲ. ಈ ವಿಚಾರದಲ್ಲಿ ಯಾರಾದರೂ ರಾಜಕೀಯ ಮಾಡುತ್ತಿದ್ದರೆ ಅದು ಕಾಂಗ್ರೆಸ್ ಪಾರ್ಟಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊರತು ಭಾರತೀಯ ಜನತಾ ಪಾರ್ಟಿಯಲ್ಲ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ.