ವರದಿ :ಸ್ಟೀಫನ್ ಜೇಮ್ಸ್.
ಚನ್ನಮ್ಮನ ಕಿತ್ತೂರು: ‘ಮಹಿಳೆಯರ ಮೇಲೆ ಹಲ್ಲೆ, ಬಹಿಷ್ಕಾರ’ ದಿಂಡಲಕೊಪ್ಪ ಗ್ರಾಮದಲ್ಲಿ ಘಟನೆ: ಮಾಜಿ ಸಚಿವ ಅಲ್ನೋಡ್ ಹನುಮಂತಪ್ಪ ಆರೋಪ. ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಜಮೀನು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೆಲವು ವ್ಯಕ್ತಿಗಳು ಮಾದರ ಸಮಾಜದ ಮಹಿಳೆಯರ ಮೇಲೆ ಹಲ್ಲೆ ಮಾಡಿ, ಬಹಿಷ್ಕಾರ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರನ್ನು ಬಂಧಿಸದೆ ರಾಜಾರೋಷವಾಗಿ ತಿರುಗಾಡಲು ಬಿಟ್ಟಿದ್ದಾರೆ’ ಎಂದು ಮಾಜಿ ಸಚಿವ ಆಲ್ನೋಡ್ ಹನುಮಂತಪ್ಪ ಆರೋಪಿಸಿದರು. ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲ್ಲೆಯಲ್ಲಿ ತೀವ್ರ ಪೆಟ್ಟು ತಿಂದ ಮಹಿಳೆಯರು ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.
‘ದಿಂಡಲಕೊಪ್ಪ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ 17 ಎಕರೆ ಜಮೀನನ್ನು ತಲೆತಲಾಂತರಗಳಿಂದ ಮಾದರ ಸಮಾಜದ ಈ ಕುಟುಂಬಗಳು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ 7 ಎಕರೆ ಮಾತ್ರ ನೀವು ತೆಗೆದುಕೊಳ್ಳಬೇಕು ಎಂದು ವೀರಭದ್ರಪ್ಪ ಮಾದರ ಮತ್ತು ಹನುಮಂತಪ್ಪ ಮಾದರ ಕುಟುಂಬಗಳ ಮೇಲೆ ಒತ್ತಡ ಹಾಕುತ್ತ ಬಂದಿದ್ದಾರೆ. ಇದಕ್ಕೊಪ್ಪದ ಆ ಕುಟುಂಬಗಳ ಮಹಿಳೆಯರಿಬ್ಬರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.
‘ಹಲ್ಲೆಯಲ್ಲಿ ದುರ್ಗವ್ವ ವೀರಭದ್ರಪ್ಪ ಮಾದರ ಮತ್ತು ಯಲ್ಲವ್ವ ಹನುಮಂತಪ್ಪ ಮಾದರ ಅವರಿಗೆ ಗಾಯಗಳಾಗಿವೆ. ಮಹಿಳೆಯರು ಮೇಲೆ ದೌರ್ಜನ್ಯ ಎಸೆಗಿದವರ ಮೇಲೆ ದೂರು ನೀಡಲಾಗಿದೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಖುದ್ದಾಗಿ ತಿಳಿಸಲು ಹೋಗಿದ್ದೆವು. ಹಲ್ಲೆ ಮಾಡಿದ ಸಂತ್ರಸ್ತ್ರರ ಮೇಲೆ ಕ್ರಮ ಕೈಗೊಳ್ಳಲು ಅವರು ಸೂಚಿಸಲಿಲ್ಲ. ಬದಲಾಗಿ, ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸೋಣ ಎಂದು ಹೇಳುತ್ತಾರೆ. ಜಮೀನು ವಿವಾದ ಬಗೆಹರಿಸಲು ಅವರಿಗೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.
‘ಆ ಊರಿನಲ್ಲಿ ಮಾದರ ಸಮಾಜದ ನಾಲ್ಕು ಕುಟುಂಬಗಳಿವೆ. ಎರಡು ಕುಟುಂಬಗಳ ಮೇಲೆ ಹಲ್ಲೆಯಾಗಿದ್ದರಿಂದ ಮನೆಯ ಗಂಡಸರು ಜೀವಭಯದಿಂದ ಊರು ಬಿಟ್ಟು ಹೋಗಿದ್ದಾರೆ. ಮತ್ತೆರಡು ಕುಟುಂಬಗಳು ಭಯದಿಂದ ವಿರೋಧಿಗಳ ಜೊತೆ ಕೈಜೋಡಿಸಿದ್ದಾರೆ’ ಎಂದು ದೂರಿದರು. ಮುಖಂಡರಾದ ಅಶೋಕ ದೊಡಮನಿ, ರಾಜು ಜಾಂಗಟಿ, ಗಂಗಾಧರ ಮುಳಕೂರ, ಮಡಿವಾಳಪ್ಪ ಒಕ್ಕುಂದ, ಗುರುಸಿದ್ದ ಜಾಂಗಟಿ, ರವಿ ಹೆಗಡೆನವರ, ಪ್ರಕಾಶ ಮಾದಿಗರ ಇದ್ದರು.
*’ರಾಜ್ಯದಾದ್ಯಂತ ಹೋರಾಟ’
*’ಮಹಿಳೆಯರ ಮೇಲೆ ಹೊಲದಲ್ಲಿ ಹಲ್ಲೆ ಮಾಡಿದ್ದರಿಂದ ಅವರ ಕೈ ಬಾವು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸದ ಪೊಲೀಸರು ಹಲ್ಲೆ ಮಾಡಿದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂತ್ರಸ್ತರ ಮೇಲೆಯೇ ಆರೋಪಿಗಳಿಂದ ದೂರು ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿದ್ದರೆ ರಾಜ್ಯದ ಎಲ್ಲ ಕಡೆಗೆ ಆದಿ ಜಾಂಬವ ಸಂಘಟನೆಯಿಂದ ಎಸ್.ಐ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು’ ಎಂದು ಆಲ್ನೋಡ್ ಹನುಮಂತಪ್ಪ ಎಚ್ಚರಿಸಿದರು.



