ಬೆಂಗಳೂರು: ಐಪಿಎಲ್ನಲ್ಲಿ ಆರ್ಸಿಬಿ ವಿಜಯದ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಸಂಬಂಧಪಟ್ಟಂತೆ ಮಾಜಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರ ಸರ್ಕಾರ ಸಹಮತ ಸೂಚಿಸಿದೆ.
ಕರ್ತವ್ಯ ಲೋಪದ ಆರೋಪದಡಿಯಲ್ಲಿ ರಾಜ್ಯ ಸರ್ಕಾರವು ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಅವರನ್ನು ಅಮಾನತು ಮಾಡಿ, ವಿವರವಾದ ವರದಿಯನ್ನು ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (DoPT) ಸಲ್ಲಿಸಿತ್ತು. ವರದಿಯಲ್ಲಿ, ಕಾಲ್ತುಳಿತಕ್ಕೆ ಪೊಲೀಸ್ ಭದ್ರತಾ ವೈಫಲ್ಯ ಹಾಗೂ ಸಂವಹನದ ಕೊರತೆ ಪ್ರಮುಖ ಕಾರಣಗಳೆಂದು ಉಲ್ಲೇಖಿಸಲಾಗಿದೆ.
ಅಖಿಲ ಭಾರತ ಸೇವಾ ನಿಯಮಗಳ ಪ್ರಕಾರ ಐಪಿಎಸ್ ಅಧಿಕಾರಿಗಳ ಅಮಾನತಿಗೆ ಅಂತಿಮ ನಿರ್ಣಯ ಕೇಂದ್ರ ಸರ್ಕಾರವೇ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಅಧಿಕಾರಿಗಳ ಕೇಡರ್ ಮತ್ತು ನೇಮಕಾತಿ ಕುರಿತು ನಿರ್ಧಾರ ತೆಗೆದುಕೊಳ್ಳಬಹುದಾದರೂ, ಅಮಾನತು ಸೇರಿದಂತೆ ಶಿಸ್ತು ಕ್ರಮದಲ್ಲಿ ಕೇಂದ್ರದ ಅನುಮೋದನೆ ಅಗತ್ಯ.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸಲ್ಲಿಸಿದ ವರದಿಯನ್ನು ಕೇಂದ್ರ ಅನುಮೋದನೆ ನೀಡಿರುವುದು ಈಗ ದೃಢವಾಗಿದೆ. ಇದರೊಂದಿಗೆ ಪ್ರಕರಣದ ಹೊಣೆಗಾರರು ನಿಗದಿಯಾಗಿದ್ದು, ಸರ್ಕಾರದಿಂದ ಶಿಸ್ತು ಕ್ರಮ ಮುಂದುವರಿಯಲಿದೆ.