ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ (RCB) ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಯನ್ನು ಬೆಂಗಳೂರು ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಮುಂಬೈಗೆ ಪಲಾಯನ ಮಾಡುವ ಯತ್ನದಲ್ಲಿದ್ದ ಅವರನ್ನು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ನಿಖಿಲ್ ವಿರುದ್ಧದ ಆರೋಪಗಳ ಪ್ರಕಾರ, ಬೆಂಗಳೂರು ಪೊಲೀಸ್ ಆಯುಕ್ತರಿಂದ ಅನುಮತಿ ಇಲ್ಲದಿದ್ದರೂ, ಆರ್ಸಿಬಿಯ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಕ್ಟರಿ ಪೆರೇಡ್ ನಡೆಯಲಿದೆ ಎಂದು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ನಂತರವೂ ಡಿಲೀಟ್ ಮಾಡಲಾಗದೆ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂ ಬಳಿ ಸೇರುವಂತಾಯಿತು.
ಅಲ್ಲದೆ, ಉಚಿತ ಟಿಕೆಟ್ ಘೋಷಣೆ, ಟಿಕೆಟ್ ವಿತರಣೆಯ ಸ್ಪಷ್ಟತೆ ಇಲ್ಲದಿರುವುದು, ಮಧ್ಯಾಹ್ನ 1 ಗಂಟೆಗೆ ಟಿಕೆಟ್ ಸಿಗಲಿದೆ ಎಂಬ ಘೋಷಣೆ ನಂತರವೂ ವಿತರಣೆಯಾಗದಿರುವುದು, ಬಳಿಕ ಮಧ್ಯಾಹ್ನ 3 ಗಂಟೆಗೆ ಸ್ಟೇಡಿಯಂಗೆ ಅಭಿಮಾನಿಗಳ ಪ್ರವೇಶ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಲಕ್ಷಾಂತರ ಜನ ಸೇರಲಿಕ್ಕೆ ಕಾರಣವಾಗಿದ್ದೇ ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದ್ದ ಪೋಸ್ಟ್. ನಿಖಿಲ್ ಸೂಚನೆಯಂತೆ ಡಿಎನ್ಎ ಮ್ಯಾನೆಜ್ಮೆಂಟ್ ಕಂಪನಿ ಕಾರ್ಯನಿರ್ವಹಿಸಿದ್ದಲ್ಲದೆ, 22 ಗೇಟ್ಗಳ ಪೈಕಿ ಕೇವಲ ಮೂರು ಗೇಟ್ಗಳನ್ನು ಮಾತ್ರ ತೆರೆಯಲಾಗಿದ್ದು, ಇದರಿಂದ ಕಾಲ್ತುಳಿತ ಸಂಭವಿಸಿದೆ. ಈ ಕಾರಣಗಳೆಲ್ಲದರ ಹಿನ್ನೆಲೆಯಲ್ಲಿ ನಿಖಿಲ್ ಸೋಸಲೆ ಬಂಧನಕ್ಕೊಳಗಾಗಿದ್ದಾರೆ.