ಮೈಸೂರು: ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುವ ಬೆಳವಣಿಗೆಯೊಂದರಲ್ಲಿ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಭವಿಸುವ ಸಾಧ್ಯತೆಯಿದ್ದು, ಡಿ.ಕೆ. ಶಿವಕುಮಾರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಸಿಎಂ ಆಗುವ ಸಾಧ್ಯತೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನವೆಂಬರ್ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿಯಲಿದ್ದಾರೆ. ಈ ಬದಲಾವಣೆಯು ಪಕ್ಷದೊಳಗಿನ ನಿರ್ಧಾರವಾಗಿ ಆಗಲಿದೆ. ಡಿಕೆಶಿ ಅಥವಾ ಖರ್ಗೆ ಅವರಲ್ಲಿ ಒಬ್ಬರು ಮುಂದಿನ ಸಿಎಂ ಆಗುವರು” ಎಂಬ ಆಶ್ಚರ್ಯಕರ ಭವಿಷ್ಯವಾಣಿಯನ್ನು ನುಡಿದಿದ್ದಾರೆ.
ಇದುವರೆಗೆ ಹಲವು ಬಾರಿ ಪಕ್ಷದದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಿರುವ ವಿಶ್ವನಾಥ್ ಈ ಬಾರಿ ನೇರವಾಗಿ ಮುಖ್ಯಮಂತ್ರಿಯ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದು, ನವೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದು ಹೇಳಿದ್ದಾರೆ.