ಮಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ–ಡಿಸಿಎಂ ಪವರ್ ಶೇರಿಂಗ್ ಚರ್ಚೆಗಳು ತೀವ್ರಗೊಂಡಿರುವ ಹಿನ್ನಲೆ, ಮಂಗಳೂರಿನಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮುಖಾಮುಖಿ ವಿಶೇಷ ಮಹತ್ವ ಪಡೆದಿದೆ ಎನ್ನಲಾಗಿದೆ. ನಾರಾಯಣ ಗುರು–ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಇಬ್ಬರೂ ಭಾಗವಹಿಸಲಿದ್ದು, ರಾಜಕೀಯ ಚರ್ಚೆಗಳು ಮಂಗಳೂರಿನ ವಾತಾವರಣವನ್ನು ಇನ್ನಷ್ಟು ಗರಿಗೆದರಿಸಿವೆ.
ಉಳ್ಳಾಲ ತಾಲೂಕಿನ ಕೊಣಾಜೆ ಮೈದಾನದಲ್ಲಿ ನಾರಾಯಣಗುರು, ಗಾಂಧೀಜಿ ಸಂವಾದದ ಶತಮಾನೋತ್ಸವ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮುಖ್ಯ ಪ್ರಾಸಂಗಿಕ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ನೇತೃತ್ವದ ಸಮಿತಿಯು ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಸುರಕ್ಷತಾ ಪರಿಶೀಲನೆಗಳನ್ನು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನಡೆಸಿದ್ದಾರೆ.
ರಾಜಕೀಯ ಕುತೂಹಲ ಹೆಚ್ಚಿಸಿದ ಸಿಎಂ–ವೇಣುಗೋಪಾಲ್ ಭೇಟಿ:
ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ, ಪವರ್ ಶೇರಿಂಗ್ ಪರಿಷ್ಕರಣೆ ಸೇರಿದಂತೆ ಹಲವು ರಾಜಕೀಯ ಚರ್ಚೆಗಳು ಚುರುಕುಗೊಂಡಿದ್ದು, ಈ ನಡುವೆ ಮಂಗಳೂರಿನಲ್ಲಿ ಸಿಎಂ ಮತ್ತು ಕೆ.ಸಿ. ವೇಣುಗೋಪಾಲ್ ಭೇಟಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲವನ್ನೇ ಕೆರಳಿಸಿದೆ.
ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತು ಗೌಪ್ಯ ಚರ್ಚೆ ಸಾಧ್ಯತೆ ಇದ್ದು, ಹೈಕಮಾಂಡ್ ನೀಡಿರುವ ಸಂದೇಶವನ್ನು ವೇಣುಗೋಪಾಲ್ ಸಿಎಂಗೆ ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೇ ದೆಹಲಿಗೆ ಕರೆದು ಮುಂದಿನ ಹಂತದ ಮಾತುಕತೆ ನಡೆಸುವ ಬಗ್ಗೆ, ಇತ್ತೀಚೆಗೆ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ ಕುರಿತು ಸಿಎಂ ವಿವರಣೆ ನೀಡಬಹುದು. ಇದೇ ಕಾರಣಕ್ಕೆ ನಾಳೆಯ ಭೇಟಿ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ ಎನ್ನಲಾಗುತ್ತಿದೆ.
ನಾರಾಯಣಗುರು–ಗಾಂಧೀಜಿ ಸಂವಾದ ಶತಮಾನೋತ್ಸವವು ಒಂದು ಐತಿಹಾಸಿಕ, ಸಾಮಾಜಿಕ ಕಾರ್ಯಕ್ರಮವಾದರೂ ರಾಜಕೀಯವಾಗಿ ಗಮನಸೆಳೆದಿರುವುದು ಸಿಎಂ–ಕೆ.ಸಿ. ವೇಣುಗೋಪಾಲ್ ಮುಖಾಮುಖಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪವರ್ ಶೇರಿಂಗ್ ಚರ್ಚೆ, ಸಿಎಂ ಬದಲಾವಣೆಯ ಊಹಾಪೋಹಗಳು ಮತ್ತಷ್ಟು ಗರಿಗೆದರಿರುವ ಸಂದರ್ಭದಲ್ಲಿ, ಮಂಗಳೂರಿನ ನಾಳೆಯ ಭೇಟಿ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಬಹುದಾದ ದಿನವಾಗಲಿದೆ ಎಂದು ಹೇಳಲಾಗುತ್ತಿದೆ.



