ಬೆಂಗಳೂರು: ಧಾರವಾಡ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್ & ಡಿಬಿ) ಅಧ್ಯಕ್ಷರಾದ ವಿನಯ್ ಕುಲಕರ್ಣಿ ವಿರುದ್ಧ ಭಾರೀ ರಾಜಕೀಯ ಬಿರುಗಾಳಿ ಎದ್ದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿರುವ ವಿನಯ್ ಕುಲಕರ್ಣಿಯನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಎಂಬ ಆಗ್ರಹದೊಂದಿಗೆ, ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎನ್. ರಮೇಶ್ ಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಬರೆದಿರುವ ಪತ್ರ ಈಗ ವಿವಾದದ ಕೇಂದ್ರಬಿಂದುವಾಗಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರು ಜಾಮೀನಿನ ಮೇಲೆ ಹೊರಗಿದ್ದರೂ, ಸುಪ್ರೀಂ ಕೋರ್ಟ್ ಅವರು ಪಡೆದಿದ್ದ ಜಾಮೀನು ರದ್ದುಗೊಳಿಸಿ ಒಂದು ವಾರದೊಳಗೆ ಸಿಬಿಐಗೆ ಶರಣಾಗುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೂನ್ 12ರಂದು ನ್ಯಾಯಾಲಯದಲ್ಲಿ ಹಾಜರಾದ ಬಳಿಕ, ಸಿಬಿಐ ಅವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಶಾಸಕರು ಸರ್ಕಾರದಲ್ಲಿ ಪದವಿಯನ್ನಿಟ್ಟುಕೊಳ್ಳುವುದು ಸಂವಿಧಾನಿಕವಾಗಿ ಅನುಚಿತ ಎಂದು ಎನ್. ರಮೇಶ್ ಕುಮಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರು ಕೆಯುಡಬ್ಲ್ಯೂಎಸ್ & ಡಿಬಿ ಅಧ್ಯಕ್ಷರಾಗಿರುವುದು ಕಾನೂನುಬದ್ಧವಲ್ಲ ಎನ್ನಲಾಗಿದೆ.
ಪತ್ರದಲ್ಲಿ, ಎಎಂಆರ್ಯುಟಿ ಯೋಜನೆಯಡಿ 2023-24 ಹಾಗೂ 2024-25ರ ಅವಧಿಗೆ ಬಿಡುಗಡೆಯಾದ ₹17,000 ಕೋಟಿಯ ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪವಿದೆ. ಇದರ ಭಾಗವಾಗಿ 7280 ಪುಟಗಳ ದಾಖಲೆಗಳು ಸಹಿತ ದೂರು ನೀಡಿ ಜಾರಿ ನಿರ್ದೇಶನಾಲಯದಿಂದ ಪ್ರಕರಣ ದಾಖಲಾಗಿರುವುದಾಗಿ ಪತ್ರದಲ್ಲಿ ಉಲ್ಲೇಖವಿದೆ.
ಪತ್ರದ ಮತ್ತೊಂದು ಭಾರೀ ಬಾಂಬ್ ಎಂದರೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಅಧ್ಯಕ್ಷ ವಿನಯ್ ಕುಲಕರ್ಣಿ ಮೇಲೆ ಪ್ರತಿ ಟೆಂಡರ್ ಪ್ರಕ್ರಿಯೆಯಲ್ಲಿ ಶೇಕಡಾವಾರು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ. ಭೈರತಿ ಸುರೇಶ್ 12%, ರಹೀಂ ಖಾನ್ 5% ಹಾಗೂ ವಿನಯ್ ಕುಲಕರ್ಣಿ 5% ಲಂಚ ಪಡೆಯುತ್ತಿದ್ದಾರೆ ಎಂಬುದು ಪತ್ರದ ಮಹತ್ವದ ಅಂಶ. ಇತರ ಅಧಿಕಾರಿಗಳು ಶೇ. 20-25% ರಷ್ಟು ಕಮಿಷನ್ ಪಡೆಯುತ್ತಿರುವ ಆರೋಪವಿದೆ.
ಈ ಕ್ರಮದ ಪರಿಣಾಮವಾಗಿ ಸರ್ಕಾರದ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಅನೇಕ ಗುತ್ತಿಗೆದಾರರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಕಮಿಷನ್ ಸಂಸ್ಕೃತಿಯ ವಿರುದ್ಧ ಮುಖ್ಯಮಂತ್ರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.