ಮೈಸೂರು : ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ನಾಗೇಂದ್ರ ಎಂಬುವವರು ರಘು ಕೌಟಿಲ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ನಾಗೇಂದ್ರ ಅವರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೆ. ರಂಗಣ್ಣ ಲಕ್ಷ್ಮಮ್ಮ ಚಾರಿಟಬಲ್ ಟ್ರಸ್ಟ್ಗೆ ಕಾನೂನು ಬಾಹಿರ ಸಿ.ಎ ನಿವೇಶನ ಪಡೆಯಲಾಗಿದೆ. ಮೈಸೂರು ತಾಲ್ಲೂಕು, ಕೇರ್ಗಳ್ಳಿ ಸರ್ವೆ ನಂ. ೨೭, ೨೯ ರಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ಸೋಮನಾಥ ನಗರ ಬಡಾವಣೆಯಲ್ಲಿ ಸಿ.ಎ. ನಿವೇಶನ ಇದಾಗಿದೆ.
ಒಟ್ಟು ೮೫ (೬೨+೬೭)/೨ ( ೫೪೮೨.೫) ಚದರ ಮೀಟರ್ಗಳು ಅಳತೆಯ ನಿವೇಶನ ಮಂಜೂರು ಮಾಡಲಾಗಿತ್ತು.
ನಿವೇಶನ ಮಂಜೂರಾತಿಗೂ ಮುನ್ನ ಸರ್ಕಾರದ ಗಮನಕ್ಕೆ ತಂದಿಲ್ಲ, ಜತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಜೂರಾತಿ ವಿಷಯ ಮಂಡಿಸಿ ಒಪ್ಪಿಗೆ ಪಡೆದಿಲ್ಲ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸಿಬ್ಬಂದಿ ಸೇರಿ ಕಾನೂನುಬಾಹಿರವಾಗಿ ರಘು ಕೌಟಿಲ್ಯ ಅವರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಹೀಗಾಗಿ ಅಕ್ರಮವಾಗಿ ನಿವೇಶನ ಪಡೆದಿರುವ ರುಘು ಕೌಟಿಲ್ಯ ವಿರುದ್ದ ಕ್ರಮ ಜರುಗಿಸುವಂತೆ ದೂರಿನಲ್ಲಿ ನಾಗೇಂದ್ರ ಒತ್ತಾಯಿಸಿದ್ದಾರೆ.
ವ್ಯವಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಖಾಸಗಿ ವ್ಯಕ್ತಿ ಆರ್. ರಘು ಕೌಟಿಲ್ಯ ಆಕ್ರಮ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸಿ.ಎ. ನಿವೇಶನವನ್ನು ಗುತ್ತಿಗೆ ಒಪ್ಪಂದ ಪತ್ರ ಮಾಡಿಕೊಟ್ಟು ಸಹಕರಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ರಾಜಶೇಖರ್, ನಗರ ಯೋಜನಾ ಸಹಾಯಕ ನಿರ್ದೇಶಕ ಪಿ.ಎಸ್.ನಟರಾಜ್, ಅಂದಿನ ಆಯುಕ್ತರುಗಳಾಗಿದ್ದ ನಟೇಶ್ ಮತ್ತು ದಿನೇಶ್ ಕುಮಾರ್, ಹಿಂದಿನ ಕಾರ್ಯದರ್ಶಿಗಳಾದ ಕುಸುಮ ಕುಮಾರಿ ಮತ್ತು ತಹಶೀಲ್ದಾರ್ ರಮಾದೇವಿ ಸಬ್ ರಿಜಿಸ್ಟ್ರಾರ್, ಪ್ರಥಮ ದರ್ಜೆ ಸಹಾಯಕ ಮಾದೇಶ್ ದ್ವೀತಿಯ ದರ್ಜೆ ಸಹಾಯಕ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗೇಂದ್ರ ಆಗ್ರಹಿಸಿದ್ದಾರೆ.
ಹಾಗೆಯೇ ಈ ಸಿ.ಎ. ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ಮುಟ್ಟುಗೋಲು ಹಾಕಿ ಕೊಳ್ಳಬೇಕೆಂದು ನಾಗೇಂದ್ ಮನವಿ ಮಾಡಿದ್ದಾರೆ.