ಬೆಂಗಳೂರು : ಜನ ಔಷಧಿ ಕೇಂದ್ರಗಳಲ್ಲಿ ಔಷಧಿ ಬಿಟ್ಟು ಬೇರೆಲ್ಲಾ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿದೆ. ಜೊತೆಗೆ ಔಷಧಿ ಕೇಂದ್ರಗಳ ಸಮಸ್ಯೆಗಳು ಕೂಡ ಗಂಭೀರವಾಗಿವೆ. ಈ ಎಲ್ಲವನ್ನೂ ಸಮಗ್ರವಾಗಿ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಅಧಿಕಾರಗಳ ತಂಡ ಮುಂದಾಗಿದೆ. ಇದು ಯಾವುದೇ ರೀತಿಯ ದಾಳಿ ಅಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸ್ಪಷ್ಟ ಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿರುವ ಔಷಧಿಗಳು ಯಾವ ರೀತಿಯವು, ಯಾವ ಗುಣಮಟ್ಟ ಹೊಂದಿವೆ, ಅವುಗಳನ್ನು ಸರ್ಕಾರ ದೃಢೀಕರಿಸಿದೆಯೇ ಎಂಬೆಲ್ಲಾ ಅಂಶಗಳನ್ನು ಪರಿಶೀಲಿಸಬೇಕಿದೆ ಎಂದರು.
ಜನೌಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯಕ್ಕೆ ಸಂಬಂಧಿಸಿವೆ. ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಂಡು ಕೇಂದ್ರ ಸರ್ಕಾರಕ್ಕೆ ನಾವು ವರದಿ ನೀಡಬೇಕಿದೆ. ಕೆಲವು ಕಡೆಗಳಲ್ಲಿ ಮದ್ದು ಬಿಟ್ಟು ಮಿಕ್ಕಿದ್ದೆಲ್ಲಾ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಇನ್ನೂ ಕೆಲ ಸಂದರ್ಭದಲ್ಲಿ ಜನೌಷಧಿ ಕೇಂದ್ರಗಳ ಮಾಲೀಕರು ತಮನ್ನು ಭೇಟಿ ಮಾಡಿ, ಸಮಯಕ್ಕೆ ಸರಿಯಾಗಿ ಸ್ಟಾಕ್ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಸಮಸ್ಯೆಗಳು ಏನು ಎಂದು ಅರಿತುಕೊಳ್ಳಲು ಅಧಿಕಾರಿಗಳು ಭೇಟಿ ನೀಡಿರುತ್ತಾರೆ ಎಂದು ತಿಳಿಸಿದರು.
ಸರಿಯಾದ ರೀತಿಯಲ್ಲಿ ಕೇಂದ್ರಗಳನ್ನು ನಡೆಸುವವರು ಯಾವುದೇ ಆರೋಪ ಮಾಡುತ್ತಿಲ್ಲ. ಸರಿ ಇಲ್ಲದ ಕೇಂದ್ರಗಳ ಮಾಲೀಕರು ಟೀಕೆ ಮಾಡುತ್ತಿದ್ದಾರೆ. ಅಧಿಕಾರಿಗಳ ತಂಡದ ಪರಿಶೀಲನೆಯ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ, ಲೋಪಗಳನ್ನು ಸರಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಬಹುತೇಕ ಕೇಂದ್ರಗಳು ಸರಿಯಾಗಿ ನಡೆಯುತ್ತಿವೆ. ಕೆಲವು ಕೇಂದ್ರಗಳಲ್ಲಷ್ಟೇ ತೊಂದರೆ ಇದೆ ಎಂದರು.



