ಬೆಂಗಳೂರು: ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ “ಅಭಿನಂದನೆಗಳು ಅಪ್ಪ” ಎಂಬ ಸಂದೇಶದೊಂದಿಗೆ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದು, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪಯಣವನ್ನು ಮೆಚ್ಚಿ ಶುಭಾಶಯಗಳನ್ನು ಕೋರಿದ್ದಾರೆ. ಇದೇ ವೇಳೆ, ಈ ಹಿಂದೆ ಐಶ್ವರ್ಯಾ ನೀಡಿದ್ದ ವಿಡಿಯೋ ಸಂದೇಶವೂ ಮತ್ತೆ ವೈರಲ್ ಆಗಿದೆ. ಅದರಲ್ಲಿ ತಮ್ಮ ತಂದೆ ಮುಖ್ಯಮಂತ್ರಿ ಯಾಕಾಗಬೇಕು ಎಂಬುದನ್ನು ಅವರು ವಿವರಿಸಿದ್ದರು.
“ಇಂದು ಜನರು ಅವರನ್ನು ಬಂಡೆ ಎಂದು ಕರೆಯಬಹುದು. ಆದರೆ ಆ ಬಂಡೆ ರೂಪುಗೊಳ್ಳಲು ಎಷ್ಟು ವರ್ಷಗಳ ಹೋರಾಟ ಮತ್ತು ಪರಿಶ್ರಮ ಬೇಕಾಯಿತು ಎಂಬುದನ್ನು ನಾವು ಬಾಲ್ಯದಿಂದಲೇ ನೋಡಿದ್ದೇವೆ” ಎಂದು ಐಶ್ವರ್ಯಾ ಹೇಳಿದ್ದರು. ದೇವರು ಅವಕಾಶಗಳನ್ನು ಮಾತ್ರ ನೀಡುತ್ತಾನೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂಬ ತಂದೆಯ ಮಾತನ್ನು ನೆನಪಿಸಿಕೊಂಡ ಅವರು, ಜನರಿಗಾಗಿ ಕೆಲಸ ಮಾಡುವ ದೊಡ್ಡ ಕನಸು ಮತ್ತು ಧ್ಯೇಯ ಹೊಂದಿರುವ ವ್ಯಕ್ತಿ ತಮ್ಮ ತಂದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು. “ಲವ್ ಯು ಅಪ್ಪ” ಎಂಬ ಮಾತಿನೊಂದಿಗೆ ಅವರ ಸಂದೇಶ ಅಂತ್ಯಗೊಂಡಿತ್ತು.



