ದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮಳೆ-ನೆರೆ ಪರಿಸ್ಥಿತಿಯ ನಿರ್ವಹಣೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಕರಾವಳಿಗರ ಕಣ್ಣೀರು ಒರೆಸಬೇಕಾದ ಸರ್ಕಾರ, ಅವರ ಕಣ್ಣಲ್ಲಿ ರಕ್ತಕಣ್ಣೀರು ಸುರಿಯುವಂತೆ ಮಾಡುತ್ತಿದೆ. ಮನೆ, ರಸ್ತೆ, ಸೇತುವೆಗಳು ಕುಸಿದಿವೆ, ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಸರಕಾರ ಮಾತ್ರ ನಿರ್ಲಕ್ಷ್ಯ ದೋರಣೆಯಲ್ಲಿದೆ” ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಮಳೆಯಾದ ನಂತರ ಮಾತ್ರ ಪರಿಸ್ಥಿತಿಯನ್ನು ತಜ್ಞರಂತೆ ವೀಕ್ಷಿಸಲು ಸಚಿವರನ್ನು ಕಳಿಸುತ್ತಿದ್ದಾರೆ ಎಂದ ಅವರು, “ಮಳೆ ಬರುವ ಮೊದಲು ಏನು ತಯಾರಿ ಮಾಡಿಕೊಂಡಿದ್ದೀರಿ?” ಎಂಬ ಪ್ರಶ್ನೆ ಎಸೆದರು. ಸರಕಾರದ ನುಡಿಗೆ ನಡತೆ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರಕಾರ ಮಳೆ ಕಾಳಜಿಗಿಂತ, ಕೊಲೆ ರಾಜಕಾರಣದಲ್ಲಿ ಆಸಕ್ತಿ ಹೊಂದಿದೆ ಎಂದು ಆರೋಪಿಸಿದ ಅವರು, “ಕೊಲೆಗಳ ಹಿಂದೆ ರಾಜಕೀಯ ಕೂಳು ಬೇಯಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಶಾಂತಿಯ ತೋಟವನ್ನೇ ವಿಷದ ತೋಟವನ್ನಾಗಿ ಪರಿವರ್ತಿಸಿದೆ” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯನವರನ್ನು ನೇರವಾಗಿ ಟೀಕಿಸಿದ ಅವರು, “ಇದೇ ನಿಮ್ಮ ಜನಪರ ಆಡಳಿತವೋ? ಕರಾವಳಿಗೆ ಭೇಟಿ ನೀಡಿ, ಮಳೆ ಮತ್ತು ಹತ್ಯೆಗಳಿಂದ ನರಳುತ್ತಿರುವ ಜನರಿಗೆ ಧೈರ್ಯ ನೀಡುವುದು ನಿಮ್ಮ ಕರ್ತವ್ಯ” ಎಂದು ಸಲಹೆ ನೀಡಿದರು.