ಬಾಗಲಕೋಟೆ: ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, “ಈ ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31ಕ್ಕೂ ಮುನ್ನ ಪತನವಾಗಲಿದೆ” ಎಂಬ ಭವಿಷ್ಯವಾಣಿ ನುಡಿದರು. ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳ ಕಾಂಗ್ರೆಸ್ನ ಹಲವು ಹಿರಿಯ ಶಾಸಕರಲ್ಲಿ ಮಂತ್ರಿಪದ ನೀಡದಿರುವ ಅಸಮಾಧಾನ ಗಂಭೀರವಾಗಿದೆ. ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ. ದೇಶಪಾಂಡೆ, ಜಯಚಂದ್ರ ಮೊದಲಾದವರು ಸರ್ಕಾರದಲ್ಲಿ ಗೌರವ ಇಲ್ಲ ಎಂದು ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು.
ಸಿಎಂ ಸ್ಥಾನಕ್ಕೆ ನಾಲ್ಕು ಗುಂಪುಗಳ ನಡುವೆ ಕಚ್ಚಾಟ ನಡೆಯುತ್ತಿದೆ. ದಲಿತರು, ಲಿಂಗಾಯತರು, ಒಕ್ಕಲಿಗರು ಮತ್ತು ಅಲ್ಪಸಂಖ್ಯಾತರು – ಎಲ್ಲರೂ ತಮ್ಮ ಗುಂಪಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬ ಒತ್ತಡವೂ ಹೈಕಮಾಂಡ್ ಮೇಲೆ ಹೆಚ್ಚಾಗಿದೆ.
“ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಹೋರಾಟ ಸತ್ತ ಹೆಣದ ಮೇಲೆ ರಣಹದ್ದುಗಳು ಕಚ್ಚಾಡುವಂತಿದೆ” ಎಂದು ಕಾರಜೋಳ ಟೀಕಿಸಿದರು.
ಇಲ್ಲದೇ, ಎಸ್ಸಿ-ಎಸ್ಟಿ ಅನುದಾನಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಆಡಳಿತದ ಹಿಡಿತ ಕೈ ತಪ್ಪಿದೆ. ಇದು ಬಂಡ ಸರ್ಕಾರ. ಕಾಂಗ್ರೆಸ್ನ ಇತರ ಹಿರಿಯ ನಾಯಕರು ಕೂಡಾ ಈ ಸರ್ಕಾರ ನಡೆಯಲಾರದು ಎಂಬ ಅಭಿಪ್ರಾಯದಲ್ಲಿದ್ದಾರೆ ಎಂದರು.
“ಈ ಸರ್ಕಾರ ಡಿಸೆಂಬರ್ 31 ದಾಟಲಾರದು, ಪತನ ಖಚಿತ” ಎಂದು ಕಾರಜೋಳ ವಿಶ್ವಾಸದೊಂದಿಗೆ ಹೇಳಿದ್ದಾರೆ.