ಬೆಂಗಳೂರು: ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಮತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸೂಕ್ತ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಪರಿಷತ್ ಸದಸ್ಯರ ನಿಯೋಗವು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಿದೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸದಸ್ಯರು ಸಭಾಪತಿಯನ್ನು ಭೇಟಿ ಮಾಡಿ, ರವಿಕುಮಾರ್ ಮತ್ತು ನಾರಾಯಣಸ್ವಾಮಿ ನೀಡಿದ ಹೇಳಿಕೆಗಳು ಅಪಮಾನಕಾರಿ ಹಾಗೂ ಕೋಮುವಾದಿ ಸ್ವಭಾವದ್ದಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿಯೋಗದ ನೇತೃತ್ವವನ್ನು ಪುಟ್ಟಣ್ಣ, ಸಲೀಂ ಅಹಮ್ಮದ್, ಕೆ. ಗೋವಿಂದರಾಜು, ಸುಧಾಮ್ ದಾಸ್, ಶ್ರೀನಿವಾಸ್, ಎಸ್. ರವಿ ಮತ್ತು ದಿನೇಶ್ ಗೂಳಿಗೌಡ ವಹಿಸಿದ್ದರು.
ಶಿಸ್ತು ಶಿಫಾರಸು:
ಎನ್. ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ನೀಡಿದ ಹೇಳಿಕೆ ಜಾತ್ಯತೀತ ಸಾಂವಿಧಾನಿಕ ಮೌಲ್ಯಗಳಿಗೆ ವಿರೋಧವಾಗಿದ್ದು, ಅವರ ವಿರುದ್ಧ ಖಂಡನೆ ಅಥವಾ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸದಸ್ಯರು ಕೇಳಿದ್ದಾರೆ.
ಪದ ಬಳಕೆ ಸರಿಯಲ್ಲ: ‘ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಮಾತುಗಳು ಅಸಂಬದ್ಧವಾಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿ ವಿರುದ್ಧ ಇಬ್ಬರು ನಾಯಕರು ಆಡಿದ ಮಾತಿನ ಬಗ್ಗೆ ಕ್ರಮ ಜರುಗಿಸಬೇಕು. ಈ ರೀತಿಯ ಪದ ಬಳಕೆ ಸರಿಯಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪರಿಷತ್ ಸದಸ್ಯ ಸಲೀಂ ಅಹ್ಮದ್ ಒತ್ತಾಯಿಸಿದರು.
ನಾರಾಯಣಸ್ವಾಮಿಗೆ ಆಗ್ರಹ:
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಾರಾಯಣಸ್ವಾಮಿ ನೀಡಿದ ಅವಹೇಳನಕಾರಿ ಹೇಳಿಕೆಗೆ ಅವರು ಕ್ಷಮೆಯಾಚಿಸದಿರುವುದರಿಂದ, ಅವರ ವಿರುದ್ಧ ಕೂಡ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.
ದೂರು ಸ್ವೀಕರಿಸಿದ್ದೇನೆ, ಸದನದ ನಿಯಮಗಳ ಪರಿಶೀಲನೆಯ ನಂತರ ಕ್ರಮ ಕೈಗೊಳ್ಳುತ್ತೇನೆ,” ಎಂದು ಸಭಾಪತಿ ಹೊರಟ್ಟಿ ತಿಳಿಸಿದ್ದಾರೆ.