ಮಡಿಕೇರಿ : ಜಲ ಮೂಲವನ್ನು ಉಳಿಸಲು ಅರಣ್ಯ ಸಂರಕ್ಷಿಸುವುದು ಅತ್ಯಗತ್ಯ ಎಂದು ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಅವರು ಪ್ರತಿಪಾದಿಸಿದ್ದಾರೆ.
ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಗರದ ಎಫ್ಎಂಸಿ ಕಾಲೇಜಿನಲ್ಲಿ ?ವನಮಹೋತ್ಸವ ಸಪ್ತಾಹ?ಕ್ಕೆ ಶನಿವಾರ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನದಿ ಮೂಲ ಇರುವುದೇ ಅರಣ್ಯ ಪ್ರದೇಶದಲ್ಲಿ ಎಂಬುದನ್ನು ಯಾರೂ ಸಹ ಮರೆಯಬಾರದು. ಆದ್ದರಿಂದ ಅರಣ್ಯವನ್ನು ರಕ್ಷಿಸಿದಲ್ಲಿ ಪ್ರತಿಯೊಬ್ಬರೂ ಸಮೃದ್ಧಿಯ ಬದುಕು ಕಾಣಬಹುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಹೇಳಿದರು.
ಕಾಡು ಉಳಿದರೆ ನಾಡು ಉಳಿದಂತೆ. ಆದ್ದರಿಂದ ಗಿಡ ಮರಗಳನ್ನು ಬೆಳೆಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಳೆಯಾಗುತ್ತದೆ ಎಂದು ಮೂರ್ತಿ ಅವರು ಒತ್ತಿ ಹೇಳಿದರು.
ಭೂಮಿಯಲ್ಲಿ ಶೇ.೩೩ ರಷ್ಟು ಅರಣ್ಯ ಇರಬೇಕು. ಆದರೆ ಶೇ.೨೩ ರಷ್ಟು ಮಾತ್ರ ಅರಣ್ಯ ಇದೆ. ಇನ್ನೂ ೧೦ ರಷ್ಟು ಅರಣ್ಯ/ ಕಾಡನ್ನು ಬೆಳೆಸಬೇಕಿದೆ. ಆದ್ದರಿಂದ ಇರುವ ಭೂಮಿಯಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸಿದಾಗ ಕಾಲ ಕಾಲಕ್ಕೆ ಮಳೆ, ಬೆಳೆ ಕಾಣಬಹುದು ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ ಬಾಬು, ಎ.ಟಿ.ಪೂವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇ.ರಾಘವ, ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು, ಇತರರು ಇದ್ದರು.
ಫೀಲ್ಡ್ ಮಾರ್ಷಲ್ ಕಾಲೇಜಿನ ಆವರಣದಲ್ಲಿ ೩೦೦ ಕ್ಕೂ ಹೆಚ್ಚು ವಿವಿಧ ರೀತಿಯ ಹಣ್ಣು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ದೊರೆಯಿತು. ಒಂದು ವಾರಗಳ ಕಾಲ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಮರಗೋಡು ಮತ್ತು ಕಟ್ಟೆಮಾಡು ಸರ್ಕಾರಿ ಪ್ರಾಥಮಿಕ ಶಾಲೆ, ಗಾಳಿಬೀಡು ಮತ್ತು ಕಡಗದಾಳು ಸರ್ಕಾರಿ ಪ್ರೌಢಶಾಲೆ, ಜುಲೈ, ೦೨ ರಂದು ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಕುಶಾಲನಗರ ಎಪಿಎಂಸಿ ಯಾರ್ಡ್, ಮಾದಪಟ್ಟಣ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಹುಲುಗುಂದ ಎಚ್ವಿ ಪಾರ್ಕ್, ಹಾರಂಗಿ ಟ್ರೀ ಪಾರ್ಕ್, ರಸಲ್ಪುರ ಗ್ರಾ.ಪಂ. ಕಾವೇರಿ ನದಿ ದಡದಲ್ಲಿ ಗಿಡಗಳನ್ನು ನೆಡಲಾಗುತ್ತದೆ.
ಹಾಗೆಯೇ ಜುಲೈ, ೦೩ ರಂದು ತಾವೂರಿನ ಐಟಿಐ ಕಾಲೇಜು, ಕೋರಂಗಾಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕರಿಕೆ ಸರ್ಕಾರಿ ಪ್ರೌಢ ಶಾಲೆ, ಕಕ್ಕಬ್ಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಪೋಕ್ಲು ಸರ್ಕಾರಿ ಅಂಬೇಡ್ಕರ್ ಶಾಲೆ, ಜುಲೈ, ೦೪ ರಂದು ಸಂಪಾಜೆ ಸರ್ಕಾರಿ ಆಸ್ಪತ್ರೆ, ಸಂಪಾಜೆಯ ಹಿರಿಯ ಪ್ರಾಥಮಿಕ ಶಾಲೆ, ಪೆರಾಜೆ, ಕೊಯನಾಡು, ಚೆಂಬು, ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ.
ಜುಲೈ, ೦೫ ರಂದು ಚಿಕ್ಕಕೊಳತ್ತೂರು ಬಾಪೂಜಿ ವಿದ್ಯಾಸಂಸ್ಥೆ, ಸೀಗೆ ಮರೂರು ದೇವರಕಾಡು ಪ್ರದೇಶ, ಕೊಡ್ಲಿಪೇಟೆಯ ಪ್ರೀ ಯುನಿರ್ವಸಿಟಿ ಕಾಲೇಜು/ಪ್ರೌಢ ಶಾಲೆ, ಆಲೂರಿನ ಜಾನಕ್ಕಿ ಕಾಳಪ್ಪ ಶಾಲೆ, ಶೆಟ್ಟಿಗನಹಳ್ಳಿ ಗೋಮಾಳ ಪ್ರದೇಶ, ಅಂಕನಹಳ್ಳಿ ಊರೂಡುವೆ ಜಾಗ, ಜುಲೈ, ೦೬ ರಂದು ಸೋಮವಾರಪೇಟೆ ತಾಲ್ಲೂಕು ಸಿದ್ದಲಿಂಗಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಳ್ಳಿ ಶಾಖೆಯ ಮಂಕೆ ಗ್ರಾಮದ ಸ.ನಂ.೧/೧ ರ ಜಾಗ, ಬೇಳೂರು ಜ್ಞಾನ ವಿಕಾಸ ಶಾಲೆ, ಕಣಿವೆ ಸರ್ಕಾರಿ ಶಾಲೆ, ಗರಗಂದೂರು ಮೊರಾರ್ಜಿ ಪದವಿ ಪೂರ್ವ ವಿಜ್ಞಾನ ಕಾಲೇಜು ಇಲ್ಲಿ ಗಿಡಗಳನ್ನು ನೆಡಲಾಗುತ್ತದೆ.