ಗೋವಾ: ದಕ್ಷಿಣ ಗೋವಾದ ಪ್ರತಾಪ್ ನಗರದ ಕಾಡಿನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಯುವಕನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
22 ವರ್ಷದ ಸಂಜಯ್ ಕೆವಿನ್ ಎಂ ಎಂಬ ಯುವಕನನ್ನು ಗೋವಾ ಪೊಲೀಸರು ಬಂಧಿಸಿದ್ದು, ಯುವತಿಯನ್ನು ರೋಷ್ನಿ ಮೋಸೆಸ್ ಎಂ ಎಂದು ಗುರುತಿಸಲಾಗಿದೆ. ಇಬ್ಬರೂ ಉತ್ತರ ಬೆಂಗಳೂರು ಮೂಲದವರೆಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರೂ ಮದುವೆ ಯೋಚನೆಯಿಂದ ಗೋವಾಕ್ಕೆ ಪ್ರಯಾಣಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಆದರೆ, ಈ ಸಂಬಂಧ ವೈಮನಸ್ಯ ಉಂಟಾಗಿ ಘಟನೆ ದುರಂತದಲ್ಲಿ ಅಂತ್ಯವಾಗಿದೆ.
ಪೊಲೀಸರು ನೀಡಿದ ಮಾಹಿತಿಯಂತೆ, ಜೂನ್ 16ರಂದು ಸಂಜಯ್ ಮತ್ತು ರೋಷ್ನಿ ಗೋವಾಕ್ಕೆ ಆಗಮಿಸಿದ್ದರು. ಇಬ್ಬರೂ ಪ್ರೀತಿಯಲ್ಲಿ ಇದ್ದು, ಕುಟುಂಬದ ಒಪ್ಪಿಗೆಯಿಲ್ಲದೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಗೋವಾಕೆ ಬಂದ ನಂತರ, ಇವರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಜಗಳವು ಘರ್ಷಣೆಗೆ ತಿರುಗಿದೆ.
ಜಗಳದ ನಡುವೆಯೇ, ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಸಂಜಯ್ ತನ್ನ ಗೆಳತಿಯನ್ನು ಕತ್ತು ಸೀಳಿ ಭೀಕರವಾಗಿ ಕೊಂದು ಶವವನ್ನು ಅರಣ್ಯ ಪ್ರದೇಶಕ್ಕೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆದ ಬಳಿಕ ಸಂಜಯ್ ಅಲ್ಲಿಂದ ಪರಾರಿಯಾಗಿದ್ದಾನೆ.
ಸೋಮವಾರ ಸಂಜೆ ಸ್ಥಳೀಯರು ಕಾಡಿನಲ್ಲಿ ಯುವತಿಯ ಶವ ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಟಿಕಮ್ ಸಿಂಗ್ ವರ್ಮಾ ಮತ್ತು ತಂಡ ಧಾವಿಸಿ ಪರಿಶೀಲನೆ ನಡೆಸಿದರು. ಶವವನ್ನು ಪರಿಶೀಲಿಸಿದ ವೈದ್ಯಾಧಿಕಾರಿಗಳು ಯುವತಿಗೆ ಕತ್ತು ಸೀಳಿದ ಗಾಯವಿದ್ದು, ಇದು ಕೊಲೆ ಎಂದು ದೃಢಪಡಿಸಿದರು.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ಪ್ರಕರಣದ ಮಹತ್ವವನ್ನು ಮನಗಂಡ ಪೊಲೀಸರು ತಕ್ಷಣವೇ ಸಂಜಯ್ ವಿರುದ್ಧ ಹುಡುಕಾಟ ಆರಂಭಿಸಿದರು. ಮಂಗಳವಾರ 24 ಗಂಟೆಗಳ ಒಳಗೆ ಕರ್ನಾಟಕದ ಉತ್ತರ ಬೆಂಗಳೂರಿನಲ್ಲಿ ಸಂಜಯ್ ಪತ್ತೆಯಾಗಿ ಬಂಧನಕ್ಕೊಳಗಾದನು.