ಮೈಸೂರು : ‘ಗೃಹಲಕ್ಷ್ಮಿ ಯೋಜನೆ’ಯ ಹಣದಿಂದ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮೈಸೂರಿನ ಮಾಧುರಿ ಆರ್. ಎಂಬ ವಿದ್ಯಾರ್ಥಿನಿ ಸಾಧನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಿ ಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ತರುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನ. ಬಡವರ ಮನೆಯ ಮಗು ಇಂದು ರಾಜ್ಯಕ್ಕೆ ರ್ಯಾಂಕ್ ಪಡೆಯಲು ಗ್ಯಾರಂಟಿ ಹಣವೇ ಆಧಾರವಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸರ್ಕಾರ ನಮ್ಮ ಹೆಮ್ಮೆ, ನಮ್ಮ ಗ್ಯಾರಂಟಿ ನಮ್ಮ ಹೆಮ್ಮೆ ಎಂಬುದು ಈ ಮೂಲಕ ಸಾಬೀತಾಗಿದೆ. ಇನ್ನಾದರೂ ವಿರೋಧ ಪಕ್ಷದವರು ಸುಳ್ಳು ಹೇಳುವುದನ್ನು ಜನರ ದಾರಿತಪ್ಪಿಸುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳು ಓದಿಗೆ ನೆರವು, ಭವಿಷ್ಯಕ್ಕೆ ಭರವಸೆ ಮೂಡಿಸುತ್ತಿವೆ. ಗ್ಯಾರಂಟಿಗಳು ಜನರ ಜೀವನದ ದಿಕ್ಕನ್ನೇ ಬದಲಿಸುತ್ತಿವೆ. ಯಾರೋ ದೇವರಿಗೆ ಕಿರೀಟ ಮಾಡಿಸಿದರೆ, ಇನ್ಯಾರೋ ಜೀವನೋಪಾಯಕ್ಕಾಗಿ ಬಳೆ ಅಂಗಡಿ ಅಥವಾ ಗೂಡು ಅಂಗಡಿ ಇಟ್ಟುಕೊಂಡು ಸ್ವಾವಲಂಬಿಗಳಾಗುತ್ತಿದ್ದಾರೆ. ಈಗ ಶಿಕ್ಷಣ ರಂಗದಲ್ಲೂ ಗ್ಯಾರಂಟಿ ಯೋಜನೆಗಳು ಕ್ರಾಂತಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಮೈಸೂರಿನ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಾಧುರಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಖಾಸಗಿ ಕೆಲಸದಲ್ಲಿದ್ದ ಮಾಧುರಿ ತಾಯಿ ಸರಿತಾ ಅವರು ಅನಾರೋಗ್ಯದಿಂದ ಕೆಲಸ ಬಿಡಬೇಕಾಯಿತು. ಆಗ ತಾಯಿಗೆ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ರೂಪಾಯಿಯಲ್ಲಿ ಮಾಧುರಿಗೆ ಟ್ಯೂಷನ್ ಫೀಸ್ ಕಟ್ಟಿದ್ದರು.



