ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ : ಕ್ಷೇತ್ರದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲುಸರ್ಕಾರದಿಂದ ಅನುದಾನ ತಂದು ಉತ್ತಮ ಕೆಲಸ ಮಾಡುವ ಮೂಲಕ ಶಾಸಕ ಡಿ. ರವಿಶಂಕರ್ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ತಾಪಂ ಉಪಾಧ್ಯಕ್ಷ ಕೆಸ್ತೂರು ಕೊಪ್ಪಲು ಕೆ.ಎಸ್. ಅರವಿಂದ್ ಹೇಳಿದ್ದಾರೆ.
ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ವ್ಯಾಪ್ತಿಯ ಪ್ರಮುಖ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಸೇತುವೆ, ಏತ ನೀರಾವರಿ, ಗ್ರಾಪಂ ಕಟ್ಟಡ ಸೇರಿದಂತೆ ಇತರ ಶಾಶ್ವತ ಕಾಮಗಾರಿಗೆ 513 ಕೋಟಿ ರೂ. ಹಣ ಬಿಡುಗಡೆ ಮಾಡಿಸಿರುವುದು ದಾಖಲೆಯಾಗಿದೆ ಎಂದಿದ್ದಾರೆ.
ಈ ಪೈಕಿ ಈಗಾಗಲೇ ಹಲವಾರು ಕಾಮಗಾರಿಗಳು ಪೂರ್ಣಗೊಂಡಿದ್ದು ಉಳಿದವನ್ನು ಆರಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೇ 23 ರಂದು ಕೆ.ಆರ್. ನಗರದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಚಾಲನೆ ಕೊಡಿಸಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಮುಖವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಲೆಗಳ ಆಧುನೀಕರಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 197 ಕೋಟಿ ರೂ. ಹಣ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ತೋರಿಸುವ ಮೂಲಕ ರೈತರ ದಶಕಗಳ ಕನಸನ್ನು ನನಸು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇದರ ಜತೆಗೆ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಕಪ್ಪಡಿ ಕ್ಷೇತ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ. ಮತ್ತು ಕೆಸ್ತೂರು ಗೇಟ್ ಬಳಿ ಕಾವೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ 60 ಕೋಟಿ ರೂ. ಹಣ ಮಂಜೂರಾಗಿದ್ದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬ್ಯಾಡರಹಳ್ಳಿ, ಕೆಸ್ತೂರು, ಮಾವತ್ತೂರು ಮತ್ತು ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಯೋಜನೆ ಹಮ್ಮಿಕೊಂಡಿದ್ದು ಇದು ರೈತರ ಪಾಲಿಗೆ ಅತ್ಯಂತ ಸಂತಸದ ವಿಚಾರ ಎಂದಿದ್ದಾರೆ.
ಕಳೆದ ಎರಡು ವರ್ಷಗಳ ಅವದಿಯಲ್ಲಿ ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತಿರುವ ಶಾಸಕರು ತಮಗೆ ಮತದಾರರು ವಹಿಸಿದ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿ ಸುತ್ತಿದ್ದು ಇಂತಹವರ ಬೆನ್ನ ಹಿಂದೆ ಎಲ್ಲರೂ ನಿರಂತರವಾಗಿ ನಿಲ್ಲಬೇಕೆಂದು ಕೋರಿದ್ದಾರೆ