ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಕಳೆದ 70 ವರ್ಷಗಳಲ್ಲಿ ಯಾವುದೇ ಹಿಂದುಳಿದ ವರ್ಗದ ಅಭ್ಯರ್ಥಿಗೆ ಅವಕಾಶ ನೀಡಲೇ ಇಲ್ಲ. ಈ ಬಾರಿ ಲೋಕಸಭೆಗೆ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಾಮಾಜಿಕ ನ್ಯಾಯ ಒದಗಿಸ ಬೇಕೆಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯ, ರಾಜ್ಯ ಮೀನುಗಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಬೈಕಂಪಾಡಿ ಮಂಗಳೂರಲ್ಲಿ ಆಗ್ರಹಿಸಿದ್ದಾರೆ.
ಬಿಲ್ಲವ, ಗಾಣಿಗ, ಮೊಗವೀರ, ಕುಲಾಲ, ದೇವಾಡಿಗರಂತಹ ತೀರಾ ಹಿಂದುಳಿದ ವರ್ಗಕ್ಕೆ ರಾಜಕೀಯ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ತೀರಾ ಹಿಂದುಳಿದ ಪ್ರಬಲ ವರ್ಗದ ಮೀನುಗಾರ ಸಮಾಜದ ಪ್ರಬಲ ಆಕಾಂಕ್ಷಿಯಾಗಿ ನಾನು ಸ್ಪರ್ಧಿಸ ಬಯಸುತ್ತೇನೆ. ಹಲವಾರು ಬಾರಿ ಲೋಕಸಭಾ ಸ್ಥಾನದಿಂದ ವಂಚಿತನಾಗಿದ್ದೇನೆ. 2007 ರಲ್ಲಿ ದೆಹಲಿಯಲ್ಲಿ ನಡೆದ ಬಿ.ಜೆ.ಪಿ. ಮೀನುಗಾರರ ಸಮಾವೇಶದಲ್ಲಿ ನಾನು, ದಕ್ಷಿಣ ಭಾರತದ ಪ್ರತೀ ಸಮುದ್ರ ಆದರಿತ ರಾಜ್ಯದಲ್ಲಿ ಪ್ರತಿ ಒಂದು ಸೀಟು ಕೊಡುವಂತೆ ವಿನಂತಿಸಿದ್ದೆ. ಆಗಿನ ರಾಷ್ಟ್ರೀಯ ಅಧ್ಯಕ್ಷರಾದ ಕುಸಬಾವು ಠಾಕ್ರೆಯವರು ಅದಕ್ಕೆ ಸ್ಪಂದಿಸಿ 2008 ರಲ್ಲಿ ಉಡುಪಿ ಲೋಕಸಭೆಯನ್ನು ಮೀನುಗಾರರ ಪರವಾಗಿ ಘೋಷಿಸಿದರು.
ಡಾ| ವಿ.ಎಸ್. ಆಚಾರ್ಯರು ನನಗೆ ಸ್ಪರ್ಧಿಸಲು ಅವಕಾಶ ನೀಡಿದರೂ, ಕಾಂಗ್ರೆಸ್ ನಿಂದ ಆಗಮಿಸಿದ ಮನೋರಮ ಮದ್ವರಾಜ್ ರವರು ಸ್ಪರ್ಧಿಸಿ ಗೆದ್ದರು. ಈ ಬಾರಿ ನನ್ನದೇ ಮಂಗಳೂರು ಲೋಕಸಭಾ ಕ್ಷೇತ್ರ ಮೀನುಗಾರರ ಪ್ರಬಲ ಸಂಘಟನಾ ಶಕ್ತಿಯಿದ್ದು ಅವಕಾಶ ನೀಡಬೇಕೆಂದು ರಾಜ್ಯದ ವರಿಷ್ಠ ನಾಯಕರ ಹತ್ತಿರ ಮನವಿ ನೀಡಿದ್ದೇನೆ ಅಂದ್ರು.
ಮಂಗಳೂರು ಕುಳಾಯಿಯಲ್ಲಿ 200 ಕೋಟಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಯಶಸ್ವಿಯಾಗಿದ್ದೇನೆ. ಈಗಾಗಲೇ ಪ್ರಸಕ್ತ ಯೋಜನೆ ಮುಂದುವರಿಯುತ್ತಿದ್ದು ಸಮಸ್ತ ಮೀನುಗಾರರ ಸಮಾಜ ಸಂತುಷ್ಟರಾಗಿದ್ದಾರೆ ಅಂದ್ರು.