ಮಂಗಳೂರು : ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಮತ್ತು ಕಲಬುರಗಿ ಕೊನೆಯ ಸ್ಥಾನ ಪಡೆದಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ, ಕರಾವಳಿ ಜಿಲ್ಲೆಯ ಬಗ್ಗೆ ಆರ್ಡಿಪಿಆರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಬಿಜೆಪಿ ಟೀಕಿಸಿದೆ.
ದಕ್ಷಿಣ ಕನ್ನಡದಲ್ಲಿ ಕೋಮು ಉದ್ವಿಗ್ನತೆಯಿಂದ ಬಂಡವಾಳ ಹೂಡಿಕೆ ಮೇಲೆ ಪ್ರಭಾವ ಬೀರಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಬಿಜೆಪಿ ನಾಯಕರಿಂದ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದರು.
ಮಂಗಳೂರು ಉತ್ತರ ನಗರದ ಶಾಸಕ ವೈ ಭರತ್ ಶೆಟ್ಟಿ, ಪ್ರಿಯಾಂಕ್ ಅವರನ್ನು ಟೀಕಿಸಿ ಅವರ ಆದ್ಯತೆಗಳನ್ನು ಪ್ರಶ್ನಿಸಿದರು. ಎಸ್ಎಸ್ಎಲ್ಸಿ ಫಲಿತಾಂಶ ಉಲ್ಲೇಖಿಸಿ, ದಕ್ಷಿಣ ಕನ್ನಡದ ಸ್ಥಿರ ಶೈಕ್ಷಣಿಕ ಸಾಧನೆ ಕಲಬುರಗಿಯ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿದೆ ಎಂದು ಶೆಟ್ಟಿ ಹೇಳಿದರು ಮತ್ತು ಸಚಿವರು ತಮ್ಮ ಸ್ವಂತ ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಬೇಕೆಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಲ್ಲಿ ಉತ್ತಮ ಸಾಧನೆ ಮಾಡಿದೆ. ಸಚಿವರು ನಮ್ಮ ಜಿಲ್ಲೆಯನ್ನು ಗುರಿಯಾಗಿಸಿಕೊಳ್ಳುವ ಬದಲು ತಮ್ಮ ಜಿಲ್ಲೆಯನ್ನು ಉನ್ನತೀಕರಿಸುವತ್ತ ಗಮನಹರಿಸಬೇಕು ಎಂದು ಭರತ್ ಶೆಟ್ಟಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕವು ಕಲಬುರಗಿಯ ಪರಿಸ್ಥಿತಿಯನ್ನು ಟೀಕಿಸುತ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮತ್ತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಿಯಾಂಕ್ ಅವರ ಕುಟುಂಬವು ದಶಕಗಳಿಂದ ರಾಜಕೀಯ ಪ್ರಾತಿನಿಧ್ಯವನ್ನು ಹೊಂದಿದ್ದರೂ, ಜಿಲ್ಲೆ ಶಿಕ್ಷಣದಲ್ಲಿ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಿಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ ಶೇಟ್ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಆರ್ಎಸ್ಎಸ್ನಂತಹ ಸಂಘಟನೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡು ಸಚಿವರು ಸ್ಥಳೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಹೇಳಿಕೆಗಳನ್ನು ಪ್ರಚೋದನಕಾರಿ ಎಂದು ಬಣ್ಣಿಸಿದ ಬಿಜೆಪಿ, ಎಸ್ಎಸ್ಎಲ್ಸಿ ಫಲಿತಾಂಶಗಳು ಆಳವಾದ ಆಡಳಿತ ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ. ಪ್ರಿಯಾಂಕ್ ಖರ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಗಮನಹರಿಸಲು ಒತ್ತಾಯಿಸಿದೆ.
ಇನ್ನೂ ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮುಗ್ದ ಮಕ್ಕಳ ಹಿಂದೆ ಅಡಗಿ ಟ್ವೀಟ್ ಮಾಡುವುದನ್ನು ಬಿಡಿ ಅದು ಹೇಡಿತನ, ಕಲಬುರಗಿಯ ಮಕ್ಕಳು ಪ್ರತಿಭಾವಂತರು, ನಾವು ಪ್ರಶ್ನಿಸಿದ್ದು ಮಕ್ಕಳನ್ನಲ್ಲ, ಬದಲಿಗೆ ಅವರ ಕಲಿಕೆಗೆ ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡದ ನಿಮ್ಮ ಕುಟುಂಬದ ದಶಕಗಳ ಅಸಮರ್ಥ ಆಡಳಿತವನ್ನು ಎಂದಿದೆ.
ಶಾಸಕ, ಮಂತ್ರಿ, ಸಂಸದರಾಗಿ 5 ದಶಕಗಳ ಕಾಲ ನಿಮ್ಮ ಕುಟುಂಬ ಕಲಬುರ್ಗಿಯನ್ನು ಅಧಿಕ ಬಾರಿ ಪ್ರತಿನಿಧಿಸಿದ್ದೀರಿ ಆದರೆ ಅಭಿವೃದ್ಧಿ ಮಾತ್ರ ಶೂನ್ಯ! ನಿಮ್ಮ ಅಪ್ಪ, ಬಾವ ಮತ್ತು ನಿಮ್ಮ ದುರಾಡಳಿತದ ಫಲ ಕೇವಲ ಶಿಕ್ಷಣದಲ್ಲಷ್ಟೇ ಅಲ್ಲ ತಲಾದಾಯ, ಅಭಿವೃದ್ಧಿ ಪ್ರತಿಯೊಂದರಲ್ಲೂ ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ ಎಂಬ ಪಟ್ಟ ಫಿಕ್ಸ್ ಆಗಿಬಿಟ್ಟಿದೆ! ಮೊದಲು ನೀವು ಅಧಿಕಾರದಿಂದ ತೊಲಗಿದರೆ, ಅಭಿವೃದ್ಧಿ ಮತ್ತು ಶಿಕ್ಷಣದಲ್ಲಿ ಕಲಬುರಗಿಗೆ ಅಂಟಿರುವ ಆ ‘ಕೊನೆಯ ಸ್ಥಾನದ ಶಾಪ’ವಾದರೂ ವಿಮೋಚನೆ ಆಗುತ್ತದೆ ಎಂದು ಬಿಜೆಪಿ ಕಿಡಿ ಕಾರಿದೆ.



