ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಗ್ಯಾಂಗ್ ಬಳಿಯಿಂದ ಸೀಜ್ ಮಾಡಲಾಗಿದ್ದ 82 ಲಕ್ಷ ರೂ. ಹಣಕ್ಕೆ ಯಾವುದೇ ದಾಖಲೆ ತೋರಿಸಲು ದರ್ಶನ್ ವಿಫರಾಗಿದ್ದು, ಇದು ಕೃಷಿ ಹಾಗೂ ಪಶು ಸಂಗೋಪನೆಯಿಂದ ಬಂದುದಾಗಿ ತಿಳಿಸಿದ್ದಾರೆ. ಆದರೆ ಐಟಿ ಹಾಗೂ ಪೊಲೀಸರು ಈ ಹೇಳಿಕೆಯ ಸತ್ಯ ಪರಿಶೀಲನೆಗೆ ಮುಂದಾಗಿದ್ದು, ಈ ಹಣವನ್ನು ಕೊಲೆ ಪ್ರಕರಣದ ಸಾಕ್ಷಿ ನಾಶಕ್ಕೆ ಬಳಸಲಾಗಿದೆ ಎಂದು ತರ್ಕಿಸಿದ್ದಾರೆ.
ಈ ವೇಳೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ 82 ಲಕ್ಷ ರೂ. ನಗದು ಹಣ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ದರ್ಶನ್ ಹೇಳಿಕೆ ಪಡೆಯಲಾಗಿದೆ. ಐಟಿ ಅಧಿಕಾರಿಗಳ ಮುಂದೆ A2 ಆರೋಪಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಕೃಷಿ ಮತ್ತು ಪಶು ಸಂಗೋಪನೆಯಿಂದ ಬಂದ ಹಣ ಎಂದು ದರ್ಶನ್ ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಆದರೆ ಈ ಹಣಕ್ಕೆ ನನ್ನ ಬಳಿ ಯಾವ ದಾಖಲೆಗಳು ಇಲ್ಲ. ಈ ಬಗ್ಗೆ ಐಟಿ ರಿಟರ್ನ್ಸ್ ವೇಳೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಇನ್ನೂ ಸಾಲ ಕೊಟ್ಟಿದ್ದು, ಸಾಲ ಪಡೆದಿದ್ದರ ಪ್ರಶ್ನೆಗೆ ಉತ್ತರಿಸಿದ್ದು, ಮೋಹನ್ ರಾಜ್ಗೆ ಸಾಲವಾಗಿ ಹಣ ನೀಡಿದ್ದೆ. 2024 ಫೆಬ್ರವರಿಯಲ್ಲಿ ಸಾಲ ಕೊಟ್ಟು ಮೇ ನಲ್ಲಿ ವಾಪಸ್ ಪಡೆದಿದ್ದೆ. 3 ವರ್ಷದಿಂದ ಕೃಷಿಗೆ 25 ಲಕ್ಷ ರೂಪಾಯಿ ಮತ್ತು ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಾಗಿ ತಿಳಿಸಿದ್ದಾರೆ.
ಈ ಹಣಕ್ಕೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಮೋಹನ್ ರಾಜ್ಗೆ ಬಿಟ್ಟರೆ ಯಾರಿಗೂ ನಗದು ರೂಪದಲ್ಲಿ ಸಾಲ ಕೊಟ್ಟಿಲ್ಲ. ಆರು ವರ್ಷದಿಂದ ನಾನು ಸಾಲ ಕೊಟ್ಟಿಲ್ಲ ಪಡೆದೂ ಇಲ್ಲ. ಉಳಿದ ಹಣದ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು ದರ್ಶನ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ದರ್ಶನ್, ವಿಜಯಲಕ್ಷ್ಮಿ, ಪ್ರಧೋಷ್, ನಿಖಿಲ್ ಹಾಗೂ ಕೇಶವಮೂರ್ತಿ ಮನೆಯಲ್ಲಿ 82 ಲಕ್ಷ ರೂಪಾಯಿ ಹಣ ಸಿಕ್ಕಿತ್ತು ಎಂದು ತಿಳಿಸಲಾಗಿದೆ.



