ಬೆಂಗಳೂರು: ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳ ಸಾವು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಾವುಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಅವರು ಅರಣ್ಯಾಧಿಕಾರಿಗಳಿಗೆ ತುರ್ತು ಸೂಚನೆ ನೀಡಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿದ ಖಂಡ್ರೆ, ಈ 82 ಹುಲಿಗಳ ಪೈಕಿ ಎಷ್ಟು ಸಹಜವಾಗಿ ಮತ್ತು ಎಷ್ಟು ಅಸಹಜವಾಗಿ ಮೃತಪಟ್ಟಿವೆ ಎಂಬ ವಿವರ ಹಾಗೂ ತನಿಖಾ ವರದಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಹುಲಿಗಳ ಅಂಗಾಂಗಗಳು ಕತ್ತರಿಸಲಾಗಿದೆ ಎಂದಾದರೆ, ಯಾವುದೇ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ಅಥವಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದ್ದಾರೆ.
ಹುಲಿ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳನ್ನು ಬಂಧಿಸಲಾಗಿದೆ? ಎಷ್ಟು ಜನರಿಗೆ ಶಿಕ್ಷೆ ಆಯಿತು? ಎಷ್ಟು ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ ಎಂಬ ಮಾಹಿತಿಯನ್ನೂ ಅವರು ಕೇಳಿದ್ದಾರೆ.
ಮಲೆ ಮಹದೇಶ್ವರ ಕಾನನ ಪ್ರದೇಶದಲ್ಲಿ 5 ಹುಲಿಗಳ ವಿಷಪ್ರಾಶನದ ಹಾಗೂ ಚಿರತೆಯ ಕಾಲು ಕತ್ತರಿಸಿದ ಪ್ರಕರಣದ ಕುರಿತು ಎಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶಿಸಲಾಗಿದ್ದು, 7–10 ದಿನಗಳೊಳಗೆ ವರದಿ ನೀಡುವಂತೆ ಸಚಿವರು ಸೂಚಿಸಿದ್ದಾರೆ.