ಗುಂಡ್ಲುಪೇಟೆ: ಕಳೆದ ೧೫ ದಿನಗಳಿಂದ ೩೦ಕ್ಕೂ ಅಧಿಕ ಮೇಕೆಗಳು ಪಶು ಸಂಗೋಪನೆ ಇಲಾಖೆಯ ನಿರ್ಲಕ್ಷ್ಯದಿಂದ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಮೃತಪಟ್ಟಿವೆ ಎಂದು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರ ಸಿ.ಜಿ.ಕಾಂತರಾಜು ಆರೋಪಿಸಿದ್ದಾರೆ.
ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಮೇಕೆಗಳಿಗೆ ಖಾಯಿಲೆಯೊಂದು ತೆರಕಣಾಂಬಿ ಸಂತೆಯಿಂದ ಖರೀದಿಸಿ ತಂದ ಮೇಕೆ ಮರಿಯಿಂದ ಕಾಣಿಸಿಕೊಂಡಿದ್ದು, ಅದು ಕಳೆದ ೧೫ ದಿನಗಳಿಂದ ಹೆಚ್ಚಿನ ರೀತಿಯಲ್ಲಿ ಹರಡುತ್ತಿದೆ. ಇದುವರೆಗೆ ೧೫ ಮೇಕೆಗಳನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಇನ್ನೂ ಹಲವು ಮಂದಿಯು ಒಂದು, ಎರಡು ಮೇಕೆಗಳು ಸಾವನ್ನಪ್ಪುತ್ತಲೆ ಇವೆ. ಹೀಗಿದ್ದರೂ ಸಾವಿಗೆ ಸ್ಥಳೀಯವಾದ ಯಾವುದೋ ಕಾಯಿಲೆ ಕಾರಣ ಇರಬಹುದು ಎಂದು ತಿಳಿದು ಮೇಕೆ ಸಾಕಾಣಿಕೆದಾರರು ಸತ್ತ ಮೇಕೆಗಳನ್ನು ಕಸದ ತಿಪ್ಪೆ ಅಥವಾ ಭೂಮಿಯಲ್ಲಿ ಹೂಳುವುದನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತ್ವರಿತ ಕ್ರಮಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಶಿವಪುರ ವಲಯದ ಪಶು ಚಿಕಿತ್ಸಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಯಿಲೆ ತಡೆಗೆ ಅವರ ಸಲಹೆಯಂತೆ ರೈತರೇ ಮೈಸೂರಿನಿಂದ ಲಸಿಕೆ ಖರೀದಿಸಿ ತಂದಿದ್ದಾರೆ. ಲಸಿಕೆ ನೀಡಿದ ನಂತರವೂ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೇ ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದಾರೆ. ಇವರ ಜೊತೆಗೆ ಕ್ಷೇತ್ರದ ಶಾಸಕರು ಕಾಯಿಲೆ ಬಗ್ಗೆ ಮಾಹಿತಿ ಪಡೆದು ಸಚಿವರ ಗಮನಕ್ಕೆ ತಂದು ರೋಗ ತಡೆಗೆ ಕ್ರಮ ವಹಿಸಿ, ಮೇಕೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಆ ಮೂಲಕ ದಲಿತ ರೈತ ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.