ವರದಿ :ಸ್ಟೀಫನ್ ಜೇಮ್ಸ್.
2 ಎ ಮೀಸಲಾತಿ ಹೋರಾಟದಲ್ಲಿ ತೊಡಗಿದ್ದ ಪಂಚಮಸಾಲಿಗರ ಮೇಲಿನ ಹಲ್ಲೆಯನ್ನು ಖಂಡಿಸಿ ಡಿ.10 ರಂದು ಕಪ್ಪು ಪಟ್ಟಿ ಕಟ್ಟಿಕೊಂಡು ಲಿಂಗಾಯಿತರ ಮೇಲಿನ ದೌರ್ಜನ್ಯ ದಿನವೆಂದು ಆಚರಿಸಲಾಗುವುದು. ಇದರಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಸವಜಯ ಮೃತ್ಯುಂಜಯ ಸ್ವಾಮಿಜೀಗಳು ಕರೆ ನೀಡಿದ್ದಾರೆ.
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. 2024ರ ಡಿಸೆಂಬರ್ 10 ರಂದು ಪಂಚಮಸಾಲಿ ಲಿಂಗಾಯಿತ ಹೋರಾಟಗಾರರ ಮೇಲೆ ನಡೆಸಿದ ಹಲ್ಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಘಟನೆಯನ್ನು ಖಂಡಿಸಿ, ಇದೇ ಡಿ.10 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಮಹಾತ್ಮಾಗಾಂಧಿ ಭವನದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಲಿಂಗಾಯಿತರ ಮೇಲಿನ ದೌರ್ಜನ್ಯ ದಿನವೆಂದು ಆಚರಿಸಿ, ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು. ಲಿಂಗಾಯಿತ ಧರ್ಮದ ಎಲ್ಲ ಶಾಸಕರು ಅಂದಿನ ದಿನ ಸದನದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ನಿಷೇಧ ವ್ಯಕ್ತಪಡಿಸಬೇಕು. ಹೋರಾಟದ ಫಲವಾಗಿ ನ್ಯಾಯಮೂರ್ತಿಗಳು ತನಿಖೆಯನ್ನು ಮಾಡಿದ್ದು, ವರದಿ ಬಾಕಿಯಿದೆ. ಈ ಮೌನ ಸತ್ಯಾಗ್ರಹಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
ಹಲ್ಲೆಯ ಬಳಿಕ ಮರುದಿನ ಸಿಎಂ ಅಧಿವೇಶನದಲ್ಲಿ ಪಂಚಮಸಾಲಿ ಹೋರಾಟವನ್ನು ಅಸಂವಿಧಾನಿಕ ಎಂದು ಕರೆದರು. ಡಿಸೆಂಬರ್ 10 ರೊಳಗೆ ಸಿಎಂ ಈ ಕುರಿತು ಯಾವುದಾದರೂ ನಿರ್ಣಯ ಕೈಗೊಳ್ಳಬೇಕು. ಜನರಿಗೆ ಎಲ್ಲವನ್ನು ಮನವರಿಕೆ ಮಾಡಿಕೊಡುತ್ತೇವೆ. ಜನಾದೇಶದಂತೆ ಹೋರಾಟವನ್ನು ಮುಂದುವರೆಸುತ್ತೇವೆ. ನಮ್ಮ ಸಮುದಾಯದ ಎಲ್ಲ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ಕೊನೆಯ ಪಕ್ಷ ಶಾಸಕರು ಮೀಸಲಾತಿಗಾಗಿ ಮಾತನಾಡಲೂ ಆಗದಿದ್ದರೂ, ನಮ್ಮ ಮೇಲಿನ ಹಲ್ಲೆಯನ್ನಾದರೂ ಖಂಡಿಸಬೇಕು. ಅಧಿಕಾರದಲ್ಲಿರುವ ಶಾಸಕರು ಈ ಘಟನೆಯನ್ನು ಖಂಡಿಸಿಲ್ಲ. ಆದರೇ, ವಿಪಕ್ಷ ಶಾಸಕರು ಅಧಿವೇಶನವನ್ನು ಖಂಡಿಸಿ ನಮ್ಮ ಬೆಂಬಲಕ್ಕೆ ಬಂದಿದ್ದಾರೆ ಎಂದರು.
ಇಷ್ಟುದಿನ ಸುಮ್ಮನಿದ್ದ ಶಾಸಕರು ಮೀಸಲಾತಿ ಕೇಳಲು ಮುಜುಗರವಾಗುತ್ತಿದ್ದರೇ ಕನಿಷ್ಠ ಪಕ್ಷ ಪಂಚಮಸಾಲಿಗರ ಮೇಲೆ ಹಲ್ಲೆಗೈದ ಅಧಿಕಾರಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ. ರಾಜ್ಯ ಸರ್ಕಾರ ಕಿವಿಯಿದ್ದು ಕಿವುಡಾಗಿದ್ದು, ಕಣ್ಣಿದ್ದು ಕುರುಡಾದ ದಪ್ಪ ಚರ್ಮದ ಸರ್ಕಾರವಾಗಿದೆ. ಸೌಜನ್ಯಕ್ಕಾದರೂ ಹಲ್ಲೆಗೊಳಗಾದವರನ್ನು ಬಂದು ಭೇಟಿಯಾಗಿ ಮಾತನಾಡಿಸಿಲ್ಲ ಎಂದು ಆರೋಪಿಸಿದರು.



