ಅಮರಾವತಿ: ಪಕ್ಷಾಂತರ ನಿಷೇಧ ಕಾನೂನಿನ ಅನ್ವಯ ಆಂಧ್ರಪ್ರದೇಶ ಸ್ಪೀಕರ್ ವೈಎಸ್ಆರ್ಪಿ, ಟಿಡಿಪಿಯ ೮ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಆಂಧ್ರ ಸಿಎಂಒ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನರ್ಹಗೊಂಡ ಶಾಸಕರು ತಮ್ಮ ಮೂಲ ಪಕ್ಷಗಳಿಂದ ಇತರ ರಾಜಕೀಯ ಪಕ್ಷಗಳತ್ತ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದಾರೆ. ಇದು ಪ್ರಜಾಪ್ರಭುತ್ವದ ರಚನೆ ಮತ್ತು ಮತದಾರರ ಆದೇಶದ ವಿರುದ್ದವಾಗಿದೆ ಎಂಬುದನ್ನು ಸ್ಪೀಕರ್? ಗಮನಿಸಿದ್ದಾರೆ. ಹೀಗಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ‘ಪಕ್ಷಾಂತರ’ ಪಿಡುಗು ವ್ಯಾಪಕವಾಗುತ್ತಿದೆ ಎಂದು ಅವರು ಇದೇ ವೇಳೆ, ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷವೊಂದರ ಸದಸ್ಯರು ತಮ್ಮ ಪಕ್ಷವನ್ನು ತೊರೆದು, ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸುವುದನ್ನು ಪಕ್ಷಾಂತರ ಎಂದು ಕರೆಯಲಾಗುತ್ತಿದೆ.
ಈ ಅನರ್ಹತೆಯ ನಿರ್ಧಾರ ಆಂಧ್ರಪ್ರದೇಶದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಏಕೆಂದರೆ ಈ ನಿರ್ಧಾರಗಳು ವಿಧಾನಸಭೆಯ ಅಧಿಕಾರ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಸಂಭವನೀಯ ಉಪಚುನಾವಣೆಗಳ ಪರಿಣಾಮಗಳು ಮತ್ತು ಸಂಭಾವ್ಯತೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಗಳಿಗೆ ಕಾರಣವಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.