ಚಾಮರಾಜನಗರ : ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಶಿವರಾತ್ರಿ ವೇಳೆ 6 ರಿಂದ 7 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಕಾವೇರಿ ನದಿ ದಾಟಿ ಭಕ್ತರು ಈಗಾಗಲೇ ಬರುತ್ತಿದ್ದಾರೆ. ಎಸ್ಡಿಆರ್ಎಫ್, ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಭಕ್ತರನ್ನು ಸುರಕ್ಷಿತವಾಗಿ ದಾಟಿಸುವ ಕೆಲಸ ಮಾಡ್ತಿದ್ದಾರೆ.
ಪಾದಯಾತ್ರೆ ವೇಳೆ ಅರಣ್ಯ ಪ್ರದೇಶ ಕೂಡ ಸಿಗುತ್ತದೆ. ತಾಳುಬೆಟ್ಟದಿಂದ ಮಾದಪ್ಪನ ಬೆಟ್ಟದವರೆಗೂ ಕಾವೇರಿ ನದಿ ದಾಟುವ ಸ್ಥಳದಿಂದ ಎಲ್ಲೆಮಾಳವರೆಗೂ ಕೂಡ 18 ತಂಡ ಮಾಡಿದ್ದೇವೆ. ಒಂದೊಂದು ತಂಡದಲ್ಲಿ ನಾಲ್ಕು ಜನರನ್ನು ನೇಮಕ ಮಾಡಿದ್ದೀವಿ. ಇಬ್ಬರು ಅರಣ್ಯ ಸಿಬ್ಬಂದಿ, ಒಬ್ಬರು ಪೊಲೀಸ್ ಹಾಗೂ ಒಬ್ಬರು ಹೋಂ ಗಾರ್ಡ್ ಸಿಬ್ಬಂದಿ ನೇಮಕ ಮಾಡಿದ್ದಾರೆ. ಸಿಬ್ಬಂದಿಗೆ ಗನ್, ಮಚ್ಚು, ಪಟಾಕಿ ಹಾಗೂ ವೆಪನ್ ಕೊಟ್ಟಿದ್ದೇವೆ. ಒಂದು ಕಿಮೀಗೆ ಒಂದು ತಂಡ ಇದೆ. ಅಲ್ಲದೇ ಗಸ್ತು ತಿರುಗಲು ವಾಹನ ಕೊಡಲಾಗಿದೆ. ಭಕ್ತಾಧಿಗಳು ರಸ್ತೆಯ ಎಡಭಾಗದಲ್ಲಿ ಚಲಿಸಲು ಮನವಿ ಮಾಡಿಕೊಂಡಿದ್ದೇವೆ ಎಂದು ಎಸ್ಪಿ ಮುತ್ತುರಾಜು ತಿಳಿಸಿದ್ದಾರೆ.
ಜನರು ಯಾವುದೇ ಕಾರಣಕ್ಕೂ ಒಂಟಿಯಾಗಿ ಹೋಗಬೇಡಿ. ವಯಸ್ಸಾದವರು ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಮನವಿ ಮಾಡಲಾಗುತ್ತಿದೆ. ರಾತ್ರಿ ವೇಳೆ ಕಣ್ತಪ್ಪಿಸಿ ಪಾದಯಾತ್ರೆ ಹೋಗದಂತೆ ಎಚ್ಚರಿಕೆ ವಹಿಸಿದ್ದೇವೆ. ಬೆಲೆ ಬಾಳುವ ವಸ್ತು, ಚಿನ್ನಾಭರಣ ತರಬಾರದು ಎಂದು ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅಲ್ಲದೇ, ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಎಲ್ಲೆಮಾಳದಿಂದ ಮಾದಪ್ಪನ ಬೆಟ್ಟದವರೆಗೂ ವೇಗಮಿತಿ ಹಾಕಿದ್ದೇವೆ. ಪಾದಯಾತ್ರಿಗಳು ಹೋಗುವ ಹಿನ್ನೆಲೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂದು ಚಾಮರಾಜನಗರ ಎಸ್ಪಿ ಮುತ್ತುರಾಜು ತಿಳಿಸಿದ್ದಾರೆ.



