ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು.
ನಗರ ಪಾಲಿಕೆ ಒಳಚರಂಡಿ ಅವ್ಯವಸ್ಥೆ , ಕುಡಿಯುವ ನೀರು, ಜನನ-ಮರಣ ಪತ್ರ, ಇ-ಖಾತ, ರಸ್ತೆಗಳ ಕಾಮಗಾರಿಗಳ ಬಗ್ಗೆ ಮೂಲಭೂತ ಸೌಕರ್ಯಗಳ ಬಗ್ಗೆ ಸುಮಾರು 100ಕ್ಕೂ ಅಧಿಕ ಮಂದಿ ಸಾರ್ವಜನಿಕರು ವಿವಿಧ ವಾರ್ಡ್ಗಳ ಸಮಸ್ಯೆಗಳ ಬಗ್ಗೆ ನಗರಪಾಲಿಕೆ ಅಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರರಾದ ಶ್ರೀ ಐವನ್ ಡಿʼಸೋಜಾರವರು ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಮುಖವಾಗಿ ಒಳಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅನುದಾನದ ಕೊರತೆ ಇದ್ದಲ್ಲಿ ಇದನ್ನು ಸಂಬಂಧಪಟ್ಟ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಹಾಗೂ ನಗರ ಪಾಲಿಕೆಯ ಒಳಚರಂಡಿ ವ್ಯವಸ್ತೆಗೆ 1250ಕೋಟಿ ಪ್ರಸ್ತಾವನೆಯನ್ನು ನಗರ ಪಾಲಿಕೆಯು ಗುರುತು ಮಾಡಿದೆ ಮತ್ತು ಮಹಾನಗರ ಪಾಲಿಕೆಯು ಇದನ್ನು ಒಪ್ಪಿಕೊಂಡಿದೆ. ಇದರ ಅವಶ್ಯಕತೆ ಇದೆ ಈ ಯೋಜನೆ ಕೈಗೊಳ್ಳದಿದ್ದರೆ ಜನರ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅದರಿಂದ ರಾಜ್ಯ ಸರ್ಕಾರವು ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ ಯೋಜನೆಯನ್ನು ಹಂತ-ಹಂತವಾಗಿ ಕೈಗೊಳ್ಳುವಂತೆ ವಿಧಾನ ಪರಿಷತ್ ನ ಸದನದಲ್ಲಿ ಚರ್ಚಿಸಿ ಹಾಗೂ ಸಚಿವರಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ನೆಹರೂ ಮೈದಾನದಲ್ಲಿರುವ ಡೀಮ್ಡ್ ಪಾರ್ಕ್ನ ಬಗ್ಗೆ ಅಯುಕ್ತರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಸಂರ್ಭದಲ್ಲಿ ನಗರ ಪಾಲಿಕೆಯ ಹಿರಿಯ ಸದಸ್ಯರುಗಳಾದ ಭಾಸ್ಕರ್ ಮೊಯಿಲಿ, ಶಶಿಧರ್ ಹೆಗ್ಡೆ, ಅಶ್ರಫ್ ಬಜಾಲ್, ಕು|ಅಪ್ಪಿ, ನಾಗೇಂದ್ರ ಕುಮಾರ್ ಜೆ, ನವೀನ್ ಡಿʼಸೋಜಾ, ಭಾಸ್ಕರ್ ರಾವ್, ಜೀನತ್ ಶಂಶುದ್ದೀನ್, ಸತೀಶ್ ಪೆಂಗಲ್,ಕಿಶೋರ್ ಕುಮಾರ್ ಶೆಟ್ಟಿ, ಚೇತನ್ ಕುಮಾರ್, ಹೇಮಂತ್ ಗರೋಡಿ, ಸೇಸಮ್ಮಕ್ಕ ಪದ್ಮನಾಭ ಪಣಿಕ್ಕರ್, ಪ್ರಕಾಶ್ ಸಾಲ್ಯಾನ್, ಜೇಮ್ಸ್ ಪ್ರವೀಣ್, ಸ್ಟ್ಯಾನಿ ಅಳ್ವಾರಿಸ್, ಸ್ಟ್ಯಾನಿ ಲೋಬೋ, ಸಮರ್ಥ ಭಟ್, ಹಬೀಬುಲ್ಲ, ಅನಿಲ್ ಲೋಬೋ ಜೆಪ್ಪು, ಅಲ್ಟೀನ್ ಡಿಕುನ್ಹ, ಮುಂತಾದವರು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಗರಪಾಲಿಕೆ ಅಯಕ್ತರಾದ ಶ್ರೀ ರವಿಚಂದ್ರ ನಾಯಕ್ ಮಾತನಾಡಿ ಎಲ್ಲಾ ಇಂಜಿನಿಯರ್ ಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡಿ ಆದ್ಯತೆಯ ಮೇರೆಗೆ ಎಲ್ಲಾ ಕಾಮಗಾರಿಗಳನ್ನು ಕಾರ್ಯಗತಮಾಡುವುದಾಗಿ ತಿಳಿಸಿದರು. ಯಾವುದೇ ನಿರ್ದಿಷ್ಟ ವಿಚಾರಗಳನ್ನು ಅದ್ಯತೆಯ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಗರ ಪಾಲಿಕೆ ಇಂಜಿನಿಯರ್ ನರೇಶ್ ಶೆಣೈ ತಿಳಿಸಿದರು.



