Saturday, March 14, 2026
Google search engine

Homeರಾಜ್ಯಅಡುಗೆ ಅನಿಲ ದರ ಏರಿಕೆ ಖಂಡಿಸಿ, ಕೇಂದ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಆಗ್ರಹ

ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಕೇಂದ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಆಗ್ರಹ

ತುಮಕೂರು : ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣವೆಂದು ಆರೋಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ಎಸ್.ರಫೀಕ್‌ ಅಹ್ಮದ್ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲದ ಸಮಸ್ಯೆ ಎದುರಾಗಿದ್ದು, ಯುದ್ಧ ನಡೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಇಂದು ಜನಸಾಮಾನ್ಯರಿಗೆ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಈ ನಡುವೆ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಕೆಲವು ಕಡೆ ಹೆಚ್ಚು ಹಣ ಕೊಟ್ಟರೂ ಅನಿಲ ಸಿಲಿಂಡರ್ ಸಿಗದಂತಹ ಪರಿಸ್ಥಿತಿ ಎದುರಾಗಿದೆ ಎಂದರು.

ಯುದ್ಧ ಹೀಗೆ ಮುಂದುವರೆದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಾಗುವ ಆತಂಕವಿದ್ದು, ಇಂಧನ ದರ ಹೆಚ್ಚಿದರೆ ಸರಕು ಸಾಗಾಣಿಕೆ ವೆಚ್ಚ ಅಧಿಕವಾಗಿ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಇದೆಲ್ಲವೂ ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಫಲ್ಯದ ಫಲ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಪರಿಹರಿಸಬೇಕು, ಇಲ್ಲವೇ ಪ್ರಧಾನಿ ಮೋದಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ನಮ್ಮ ದೇಶದ ಆಡಳಿತ ಎತ್ತ ಸಾಗುತ್ತಿದೆ? ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿ, ಅನಿಲ ಅಭಾವ ಸೃಷ್ಟಿಯಾಗಿ ಜನರು ತೊಂದರೆ ಅನುಭವಿಸುತ್ತಿದ್ದರೂ ಯಾವುದೇ ಪರಿಹಾರ ಕ್ರಮ ತೆಗೆದುಕೊಳ್ಳದ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂದರು.

ಇನ್ನೂ ಕಾಂಗ್ರೆಸ್ ಆಡಳಿತವನ್ನು ಟೀಕಿಸುತ್ತಾ ಬಂದಿರುವ ಬಿಜೆಪಿಯವರು, ಕಾಂಗ್ರೆಸ್ ಆಡಳಿತದಲ್ಲಿ ಯಾವತ್ತೂ ಇಂತಹ ದುಸ್ಥಿತಿ ಬಂದಿರಲಿಲ್ಲ, ಕೇಂದ್ರದ ಮೋದಿ ಸರ್ಕಾರ ದೇಶವನ್ನು ೫೦ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಟೀಕಿಸಿದರು.

ಮುಖಂಡ ಇಕ್ಬಾಲ್‌ಅಹ್ಮದ್ ಮಾತನಾಡಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದಂತೆ ನಡೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರ ಹಿತ ಬೇಕಾಗಿಲ್ಲ, ಅಡುಗೆ ಅನಿಲ ದರ ಏರಿಸಿ ಜನರಿಗೆ ಹೊರೆ ಮಾಡುತ್ತಿರುವ ಕೇಂದ್ರ ಸರ್ಕಾರ ಮತ್ತೆ ಎತ್ತಿನಗಾಡಿ, ಜಟಕಾಗಾಡಿ, ಸೌದೆ ಒಲೆ ವ್ಯವಸ್ಥೆಗೆ ಜನರನ್ನು ಒಯ್ಯುತ್ತಿದೆ. ಇದೇನಾ ಇವರ ವಿಕಸಿತ ಭಾರತ ಎಂದು ಟೀಕಿಸಿದರು. ದೇಶಕ್ಕೆ ಗಂಡಾಂತರ ಬಂದಿರುವ ಸಂದರ್ಭದಲ್ಲಿ ವಿದೇಶಾಂಗ ನೀತಿಯನ್ನು ಸರಿಪಡಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಆಗದಿದ್ದರೆ ರಾಜೀನಾಮೆ ಕೊಟ್ಟು ಅಧಿಕಾರ ತ್ಯಜಿಸಿರಿ ಎಂದು ಒತ್ತಾಯಿಸಿದರು.

ನಂತರ ಮುಖಂಡ ಎನ್.ಗೋವಿಂದರಾಜು ಮಾತನಾಡಿ, ಅಗತ್ಯ ಸೇವೆಗಳಲ್ಲಿ ಒಂದಾದ ಅಡುಗೆ ಅನಿಲಕ್ಕೆ ಹಾಹಾಕಾರ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ತೆಗೆದುಕೊಂಡು ಜನರ ತೊಂದರೆ ನಿವಾರಣೆ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಂ.ಮಹೇಶ್, ಫಯಾಜ್‌ ಅಹ್ಮದ್, ನಗರಪಾಲಿಕೆ ಮಾಜಿ ಸದಸ್ಯ ಸೈಯದ್ ನಯಾಜ್‌ ಅಹ್ಮದ್, ಮುಖಂಡರಾದ ಷಣ್ಮುಖಪ್ಪ, ರೇವಣ್ಣ ಸಿದ್ಧಯ್ಯ, ಕೆಂಪಣ್ಣ, ಮೆಹಬೂಬ್ ಪಾಷ, ಆಟೋರಾಜು, ಬಿ.ಜಿ.ನಿಂಗರಾಜು, ಸುಜಾತ, ಅಂಬರೀಷ್, ಶಿವಾಜಿ, ನಟರಾಜಶೆಟ್ಟಿ, ಪಂಡಿತ್ ನಾರಾಯಣಪ್ಪ, ಜ್ವಾಲಮಾಲ ರಾಜಣ್ಣ, ಭಾಗ್ಯಮ್ಮ, ನಾಗಮಣಿ, ಕೆಂಪರಾಜು, ವಿಜಯಲಕ್ಷ್ಮಿ, ವೆಂಕಟೇಶ್, ಬೈಲಾಸ್ವಾಮಿ, ಕೈದಾಳ ರಮೇಶ್ ಮತ್ತಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular