ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾತ್ರ ನಿಲ್ಲುತ್ತಿಲ್ಲ. ದಿನಕ್ಕೊಬ್ಬರ ಹೇಳಿಕೆ ನಾನಾ ಊಹಾಪೋಹ ಸೃಷ್ಟಿಸುತ್ತಿವೆ. ಇದೀಗ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್, ಜನವರಿ 6ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ನಾಯಕತ್ವ ಬದಲಾವಣೆ ಚರ್ಚೆಗೆ ದೊಡ್ಡ ತಿರುವು ಕೊಟ್ಟಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಮಾತನ್ನು ಯಾರು ನಂಬಲು ಹೋಗಬೇಡಿ. ಅವನ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಇಕ್ಬಾಲ್ ಹುಸೇನ್ಗೆ ಮಾತಿನ ಚಟ. ಯಾರು ಅವನ ಮಾತನ್ನು ನಂಬಲು ಹೋಗಬೇಡಿ ಎಂದು ಸಿಡಿಮಿಡಿಗೊಂಡಿದ್ದಾರೆ.
ಕಾಂಗ್ರೆಸ್ನಲ್ಲಿ ಸದ್ಯ ಸಿದ್ದರಾಮಯ್ಯನಾ? ಅಥವಾ ಹೊಸ ನಾಯಕತ್ವ ಡಿಕೆಯದ್ದಾ? ಎನ್ನುವ ಗೊಂದಲ ಕೋಲಾಹಲವನ್ನೇ ಎಬ್ಬಿಸುತ್ತಿದೆ. ಈ ನಡುವೆ ಕೇಂದ್ರ ಸಚಿವ ವಿ.ಸೋಮಣ್ಣ, ಪರಮೇಶ್ವರ್ ಸಿಎಂ ಆಗಲಿ ಎಂಬ ಅಭಿಲಾಸೆ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದ್ದು, ಜ.6ರಂದು ಡಿಕೆ ಶಿವಕುಮಾರ್ಗೆ ಪಟ್ಟಾಭಿಷೇಕ ಆದರೆ ನಾನೇ ಮೊದಲು ಖುಷಿ ಪಡೋದು. ಡಿ.ಕೆ.ಶಿವಕುಮಾರ್ ಅವರಿಗೆ 6 ಹಾಗೂ 9 ಅದೃಷ್ಟ ಸಂಖ್ಯೆಗಳು. ಈ ವೇಳೆ ಡಿಕೆ ಶಿವಕುಮಾರ್ ಸಿಎಂ ಆದರೆ ನಾನೇ ಮೊದಲು ಖುಷಿ ಪಡೋದು. ಡಿಕೆ ಶಿವಕುಮಾರ್ ನನ್ನ ಆರಾಧ್ಯ ದೈವ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಎಲ್ಲವೂ ಅಂದುಕೊಂಡಂತಿಲ್ಲ. ಮೇಲ್ನೋಟಕ್ಕೆ ಸಿಎಂ ಹಾಗೂ ಡಿಸಿಎಂ ನಾವು ಜೋಡೆತ್ತು, ಜೊತೆ ಜೊತೆಗೆ ಇದ್ದೇವೆ ಎನ್ನುವ ಸಂದೇಶ ಸಾರುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗಳು, ಅದಕ್ಕೆ ಬರುವ ಪ್ರತಿಕ್ರಿಯೆ ಬೆಳವಣಿಗೆಗಳನ್ನ ಹೊಸ ದಿಕ್ಕಿಗೆ ಕೊಂಡೊಯ್ತಿದೆ.



