ಬೆಂಗಳೂರು : ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಆಸೆಯಿದೆ, ಆದರೆ ಇವತ್ತೇ ಆಗ್ತಾರೆ ಅಂತ ಹೇಳಿದ್ದೇನಾ? ಇದರ ಬಗ್ಗೆ ಸಮಯ ಬಂದಾಗ ಮಾತಾಡೋಣ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸಿದ್ದರಾಮಯ್ಯ ಇನ್ನು ಎರಡು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕಿಯಿಸಿದ ಅವರು, ಇದು ನನಗೆ ಗೊತ್ತಿಲ್ಲ, ಅವರನ್ನೇ ಕೇಳಬೇಕು. ಅವರು ಗೃಹ ಸಚಿವರಾಗಿದ್ದಾರೆ, ಅವರು ಹೇಳಿದನ್ನು ಕೇಳಬೇಕಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೀಟ್ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕು. ನಮ್ಮ ತೆರಿಗೆ ಬೇರೆ ರಾಜ್ಯಗಳಿಗೆ ಹಂಚಿಕೆ ಆಗುತ್ತೆ. ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತೆ ಅಂತಾ ನಾನು ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ಬಗ್ಗೆ ಕೂಗು ಏಳುತ್ತೆ ಅಂತ ಹೇಳಿದ್ದೆ ಎಂದಿದ್ದಾರೆ.
ಇನ್ನು ದಕ್ಷಿಣ ಭಾರತದ ಆದಾಯವನ್ನ ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಇದೆ. ಹಾಗಾಗಿ ಕ್ಷೇತ್ರ ಪುನರ್ ವಿಂಗಡಣೆ 2011ರ ಜನಸಂಖ್ಯೆ ಆಧಾರ ಅಂತಿದ್ದಾರೆ, ಇದು ಇನ್ನೂ ಮಾರಕ. ಬೆಂಗಳೂರಿನಲ್ಲಿ ಆಗ 70 ಲಕ್ಷ ಜನಸಂಖ್ಯೆ, ಈಗ ಒಂದೂವರೆ ಕೋಟಿ ಆಗಿದೆ. ರಾಜ್ಯದ ಜನಸಂಖ್ಯೆ ಏಳೂವರೆ ಕೋಟಿ ಆಗಿದೆ, ಇದು ಮುಂದೆ ನಮಗಿರುವ ಸವಾಲು ಎಂದು ತಿಳಿಸಿದ್ದಾರೆ



