ಬೆಂಗಳೂರು : ಬಾಬರ್ ಒಬ್ಬ ಆಕ್ರಮಣಕಾರ, ಆತನ ಹೆಸರನಲ್ಲಿ ಗುರುತಿಸಿರುವ ಬಾಬ್ರಿ ಮಸೀದಿಯನ್ನು ಭಾರತದ ಭ್ರಾತೃತ್ವ ಭಾವನೆಗೆ ಹೋಲಿಸದಿರಿ ಎಂದು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರಿಗೆ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ 14 ನೇ ಆವೃತ್ತಿಯಲ್ಲಿ ಆಶಯ ನುಡಿಗಳ ಜತೆಗೆ, ‘ಬಾನು ಬಾನುವಾಗಿ, ಬಾನು ಬಂಡಾಯವಾಗಿ’ ಗೋಷ್ಠಿಯನ್ನು ಉದ್ದೇಶಿಸಿ ಬಾನು ಮುಷ್ತಾಕ್ ಅವರು ಮಾತನಾಡಿದ್ದರು. ಇನ್ನೂ ಈ ಕುರಿತು ಬಾನು ಮುಷ್ತಾಕ್ ಅವರು ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ ಅಂಬೇಡ್ಕರ್ ಅವರು ಪರಿನಿರ್ವಾಣವಾದದ್ದು ಇದೇ ದಿನ. ಇದೇ ದಿನ ಬಾಬ್ರಿ ಮಸೀದಿಯೂ ಧ್ವಂಸವಾಯಿತು. ಅಲ್ಲಿ ಧ್ವಂಸವಾಗಿದ್ದು ಮಸೀದಿಯಲ್ಲ. ಬದಲಿಗೆ ದೇಶದ ಜನರ ಭ್ರಾತೃತ್ವ ಭಾವನೆ. ಇವೆರಡೂ ನಮ್ಮ ಪ್ರಜಾಪ್ರಭುತ್ವಕ್ಕೆ ಆದ ನಷ್ಟ ಎಂದು ಹೇಳಿದ್ದರು.
ಈ ಹೇಳಿಕೆ ಸಂಬಂಧ ಬಾನು ಮುಷ್ತಾಕ್ ಅವರಿಗೆ ಸುರೇಶ್ ಕುಮಾರ್ ಅವರು ಪತ್ರ ಬರೆದಿದ್ದು, ಜನರ ಪೂಜಾ ವಿಧಾನ, ನಂಬಿಕೆಗಳು, ಜಾತಿ, ಮತ, ಪ್ರದೇಶ ಮತ್ತು ಧರ್ಮವನ್ನು ಲೆಕ್ಕಿಸದೆ “ಸಾಮೂಹಿಕ ಸ್ವಾಭಿಮಾನ, ಘನತೆ ಮತ್ತು ಗೌರವ” ಎಂದು ಕರೆಯಲ್ಪಡುವ ವಿಷಯವಿದೆ. ಈ ಸಾಮೂಹಿಕ ಸ್ವಾಭಿಮಾನ, ಘನತೆ ಮತ್ತು ಗೌರವದ ಮೇಲೆ ಬಾಬರ್ ಎಂಬ ಆಕ್ರಮಣಕಾರ ದಾಳಿ ಮಾಡಿದ್ದನು. ಅಯೋಧ್ಯೆಗೆ ಬಂದ ಆತ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ದೇವಾಲಯವನ್ನು ಕೆಡವಿ ತನ್ನ ಹೆಸರಿನಲ್ಲಿ ಮಸೀದಿಯನ್ನು ನಿರ್ಮಿಸಿದ. ಇದು ಹಿಂದೂಗಳ ಮನಸ್ಸು, ಸ್ವಾಭಿಮಾನ, ಘನತೆ ಮತ್ತು ಗೌರವದ ಮೇಲೆ ನಡೆದ ಅತ್ಯಂತ ಕ್ರೂರ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಇದು ರಾಮ ಮಂದಿರ ಮತ್ತು ಬಾಬರಿ ಮಸೀದಿಯ ನಡುವಿನ ವಿವಾದವಲ್ಲ; ಇದು ರಾಷ್ಟ್ರದ ಗುರುತಿನ ಪ್ರಶ್ನೆ. ಈ ರಾಷ್ಟ್ರವು ಯಾರೊಂದಿಗೆ ಗುರುತಿಸಿಕೊಳ್ಳಬೇಕು – ರಾಮ ಅಥವಾ ಬಾಬರ್? ಭಾರತದ ಜನರು – ಅವರ ಧರ್ಮ, ಪೂಜಾ ವಿಧಾನ, ಜಾತಿ, ಮತ ಮತ್ತು ನಂಬಿಕೆಯನ್ನು ಲೆಕ್ಕಿಸದೆ ರಾಮನೊಂದಿಗೆ ಗುರುತಿಸಿಕೊಳ್ಳಬೇಕು ಏಕೆಂದರೆ ರಾಮನು ಒಬ್ಬ ಭಾರತೀಯ ಮತ್ತು ಬಾಬರ್ ಒಬ್ಬ ಆಕ್ರಮಣಕಾರ ಎಂದು ತಿಳಿಸಿದ್ದಾರೆ.



