ವಿಜಯಪುರ : ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ತಾಲೂಕು ಪಂಚಾಯತಿ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಮಾತನಾಡಿ, ಜೀವನದಲ್ಲಿ ಹೆಣ್ಣು, ಗಂಡು ಎಂದು ಭೇದಭಾವ ಮಾಡದೇ ಸಮಾನವಾಗಿ ಕಾಣಬೇಕು. ಹೆಣ್ಣನ್ನು ಕೀಳಾಗಿ ಎಂದೂ ಕಾಣಬಾರದು. ಹೆಣ್ಣಿಗೆ ಕೇವಲ ಅನುಕಂಪ ತೋರಿಸದೇ ಅವರಿಗೆ ಅವಕಾಶ ನೀಡಿದ್ದಲ್ಲಿ ಎಲ್ಲವನ್ನೂ ಮಾಡಿ ತೋರಿಸುವ ಶಕ್ತಿ ಅವರಲ್ಲಿ ಅಡಗಿದೆ. ಪ್ರಸ್ತುತ ದಿನಮಾನದಲ್ಲಿ ಗಂಡು ಹೆಣ್ಣು ಸಮಾನವಾಗಿ ಕಾಣಲಾಗುತ್ತಿದೆ.
ಭಾರತ ಸಂಸ್ಕೃತಿ ಹಾಗೂ ಸಂಸ್ಕಾರವುಳ್ಳ ರಾಷ್ಟ್ರ ಇಲ್ಲಿ ಮಹಿಳೆಯನ್ನು ಆದಿ ಅನಾಧಿ ಕಾಲದಿಂದಲೂ ದೇವತೆಯಾಗಿ ಪೂಜಿಸಲ್ಪಡುತ್ತಾಳೆ. ಆದರಿಂದಲೇ ಹೇಳಲಾಗಿದೆ. ಯತ್ರ ನಾರ್ಯಸ್ತು, ತತ್ರ ದೇವತಾಹಃ ಎಂದು ಹೆಳಲಾಗಿದೆ. ಹೆಣ್ಣು ಮಕ್ಕಳಿಲ್ಲದೇ ನಮ್ಮ ಜಗತ್ತನ್ನು ಊಹಿಸಿಕೊಳ್ಳಲು ಅಸಾಧ್ಯವಾಗಿದ್ದು, ನಾವೆಲ್ಲರೂ ಹೆಣ್ಣು ಮಕ್ಕಳಿಗೆ ಅಗೌರವ ತೋರದೆ ಅವರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವನ್ನು ನೀಡಿರುವುದು ನಮ್ಮ ದೇಶದ ಶ್ರೇಷ್ಠತೆ ಎಂದರು.
ನಂತರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಗಂಗೂಬಾಯಿ ಮಡದಾನ ಮಾತನಾಡಿ, ಹೆಣ್ಣನ್ನು ದೇವರಂತೆ ಆರಾಧಿಸುವ ಭಾರತದಲ್ಲಿ ಜನಿಸಿದ ನಾವೆಲ್ಲರೂ ನಿಜಕ್ಕೂ ಧನ್ಯರು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಘನ ಸರಕಾರ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಉದ್ಯೋಗಿನಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ನಾವೆಲ್ಲರೂ ಸರಕಾರದ ಎಲ್ಲ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ನಂತರ ಇತರರಿಗೂ ಲಾಭ ಪಡೆಯುವಂತೆ ಪ್ರೋತ್ಸಾಹಿಸಿ ಮಹಿಳೆಯರು ಸಬಲರಾಗಬೇಕು ಎಂದರು.
ಜ್ಯೋತಿ ಬಿರಾದಾರ, ಭಾರತಿ ಪಾಟೀಲ, ಜಿ.ಎಸ್.ದೇಶಮುಖ, ಶಿವಾನಂದ ಹಂಜಗಿ, ಮಾತನಾಡಿದರು. ಗ್ಯಾರಂಟಿ ಯೋಜನೆಯ ಅನುಷ್ಠಾನ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ವರದಿ ವಾಚಿಸಿದರು. ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮಹಾಂತೇಶ ಬಾಗೇವಾಡಿ, ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ, ಗ್ಯಾರಂಟಿ ಯೋಜನೆಯ ಸದಸ್ಯರಾದ ರಿಯಾನಾ ಜಮಖಂಡಿ, ಶಿವಾನಂದ ಹಂಜಗಿ, ದೀಲಿಪ ದಳವಾಯಿ, ಸಂಜು ಆಯತವಾಡ ಸೇರಿದಂತೆ ಅನುಷ್ಠಾನ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು.



