ಮೈಸೂರು : ಡಾ.ಬಾಬು ಜಗಜೀವನ ರಾಮ್ ಅವರು ಕೃಷಿ ಸಚಿವ, ರಕ್ಷಣಾ ಸಚಿವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರು ಕಾರ್ಯನಿರ್ವಹಿಸಿದ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ರವರ ಸಂಘಗಳ ಒಕ್ಕೂಟ, ಮೈಸೂರು ಜಿಲ್ಲೆ ಇವರ ವತಿಯಿಂದ ಕರ್ನಾಟಕ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ, ಡಾ.ಬಾಬು ಜಗಜೀವನರಾಮ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೋಷಿತ ಹಾಗೂ ದಲಿತ ವರ್ಗದವರು ಇಂದು ಸಮಾಜದಲ್ಲಿ ಸಮಾನತೆ ಹಾಗೂ ಸ್ವತಂತ್ರವಾಗಿ ಇರುವುದಕ್ಕೆ ಡಾ.ಬಾಬು ಜಗಜೀವನ ರಾಮ್ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.
ಮುಂದುವರೆದು, ಶೋಷಿತ ಹಾಗೂ ದಲಿತ ವರ್ಗದವರಿಗೆ ಡಾ.ಬಾಬು ಜಗಜೀವನ ರಾಮ್ ಅವರು ಮಾಡಿದಂತಹ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನವಾಗಬೇಕು ಶಿಕ್ಷಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಒತ್ತು ನೀಡಬೇಕು. ಬಡವರು, ಹಿಂದುಳಿದ ಪ್ರತಿಯೊಂದು ಸ್ತರದ ಜನರು ಶಿಕ್ಷಣ ಪಡೆಯಬೇಕು. ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಣ್ಣುಮಕ್ಕಳು ಆಸಕ್ತಿ ತೋರುತ್ತಿದ್ದು ಇತ್ತೀಚಿಗೆ ಗಂಡು ಮಕ್ಕಳಲ್ಲಿ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಎಲ್ಲಾ ಸಮುದಾಯಗಳು ಇಂದು ಮುಂದುವರೆಯುತ್ತಿದ್ದು, ಎಲ್ಲರೂ ಉನ್ನತ ಶಿಕ್ಷಣವನ್ನು ಪಡೆದು ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರು ಕಂಡಂತಹ ಕನಸು ನಿಜವಾಗಿ , ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯ ಎಂದರು. ಅಲ್ಲದೆ ಬಾಬು ಜಗಜೀವನ ರಾಮ್ ಅವರು ಮುಂದಾಲೋಚನೆಯಿಂದ ಹಾಕಿರುವ ಮಾರ್ಗದಶನದಲ್ಲಿ ನಾವೆಲ್ಲರೂ ನಡೆದು ಅಭಿವೃದ್ಧಿಯನ್ನು ಸಾಧಿಸೋಣ ಎಂದು ಹೇಳಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತಿನ ಶಾಸಕರಾದ ಡಾ.ಡಿ.ತಿಮ್ಮಯ್ಯನವರು, ಹುಟ್ಟಿದ ಮೇಲೆ ಸಾಧಕನಾಗಬೇಕು, ವಿದ್ಯಾರ್ಥಿಗಳು ಜಿಲ್ಲಾ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ನಮ್ಮ ದೇಶದ ಹೆಸರನ್ನು ಬೆಳಗಿಸಬೇಕು. ಸಮಾಜಕ್ಕೆ ಕೊಡುಗೆಯನ್ನು ನೀಡಿದ ಮಹನೀಯರಾದ ಡಾ.ಬಿ.ಆರ್.ಅಂಬೇಡ್ಕರ್ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಾಬು ಜಗ ಜೀವನ್ ರಾಮ್ ಮುಂತಾದವರನ್ನು ಆಧಾರವಾಗಿಟ್ಟಿಕೊಂಡು ಪ್ರಾಮಾಣಿಕವಾಗಿ, ಪರಿಶುದ್ಧ ಮನಸ್ಸಿನಿಂದ ಪ್ರತಿಯೊಬ್ಬರೂ ಸಾಧನೆ ಮಾಡಲೇಬೇಕು ಎಂದರು.
ಅಂತರ್ಜಾತಿಯ ವಿವಾಹವಾದರೆ ಕೊಲೆಗಳು ಹಾಗೂ ಹಳ್ಳಿಗಳಲ್ಲೋ ದಲಿತರನ್ನು ದೂರ ಇಡುವುದು ಹಿಂದಿನ ಕಾಲದಿಂದಲೂ ನಡೆಯುತ್ತಿತ್ತು, ಇದರ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದವರು ಬಾಬು ಜಗಜೀವನ ರಾಮ್ ಅವರು. ಸ್ವತಂತ್ರ ಪೂರ್ವದಲ್ಲಿ ಚಳುವಳಿಯನ್ನು ಮಾಡಿ ಗಾಂಧೀಜಿ ಅವರ ಬೆನ್ನೆಲುಬಾಗಿ ನಿಂತು ದೇಶಕ್ಕೆ ಅಪಾರ ಕೊಡುಗೆ ನೀಡಿದರು.ಅವರ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ಬಾಬು ಜಗಜೀವನ ರಾಮ್ ಅವರು ಕೂಲಿಕಾರ್ಮಿಕರಿಗಾಗಿ ಜಾರಿಗೆ ತಂದಂತಹ ಕಾಯ್ದೆಗಳು ಇಂದಿಗೂ ಜಾರಿಯಲ್ಲಿವೆ. ಇಡೀ ದೇಶಾದ್ಯಂತ ಪ್ರತಿ ಹಳ್ಳಿಗಳಿಗೂ ಅಂಚೆ ಕಚೇರಿಯನ್ನು ಕೊಡುಗೆ ನೀಡಿ ಜನರಿಗೆ ಸಂಪರ್ಕ ಸಾಧಿಸಲು ಕಾರಣಿಕರ್ತರಾದರು. ರೈಲ್ವೆ ಮಂತ್ರಿಯಾಗಿ 10 ಲಕ್ಷ ನೌಕರರಿಗೆ ಕೆಲಸ ನೀಡುತ್ತಾರೆ. ರೈತರ ಕಷ್ಟಗಳನ್ನು ನೀಗಿಸುವುದರೊಂದಿಗೆ ಜನರಿಗೆ ಆಹಾರ ಭದ್ರತೆ ನೀಡಿ ಹಸಿರು ಕ್ರಾಂತಿಯ ಹರಿಕಾರಾದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಎಲ್ಲರೂ ಸಂಘಟಿತರಾಗಿ ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ಹೇಳಿದರು.
ವಿಧಾನಸಭೆ ಪರಿಷತ್ತಿನ ಶಾಸಕರಾದ ಸಿ.ಎನ್.ಮಂಜೇಗೌಡ ಮಾತನಾಡಿ ಜಯಂತಿಗಳನ್ನು ಆಚರಿಸುವ ಉದ್ದೇಶ ಮಹಾನ್ ವ್ಯಕ್ತಿಗಳು ಬಿಟ್ಟುಹೋಗಿರುವ ಆಶಯಗಳನ್ನು ಅಳವಡಿಸಿಕೊಳ್ಳಲೆಂದು ಅವರ ಆದರ್ಶ ಹಾಗೂ ವ್ಯಕ್ತಿತ್ವವನ್ನು ಅನುಸರಿಸಾಲೆಂದು.ಜಯಂತಿಗಳಲ್ಲಿ ಹೆಚ್ಚಿನ ಜನರು ಭಾಗವಹಿಸಿ ಎಂದರು. ಈ ದೇಶವನ್ನು ಭವ್ಯ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಪ್ರಜೆಗಳಾಗಿರುವ ನಾವು ಮಹಾನೀಯರ ಮಾರ್ಗದರ್ಶನವನ್ನು ಅನುಸರಿಸಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ.ಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್ -1 ನ ಜನಾರ್ಧನ್.ಎ.ಎನ್ ಅವರು ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.



