ಮೈಸೂರು: ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ೨೦೨೨ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಡಾ. ಎಚ್.ಎಸ್. ಅನುಪಮಾರವರ ಬೆಳಗಿನೊಳಗು ಮಹಾದೇವಿಯಕ್ಕ ಕೃತಿ ಆಯ್ಕೆಯಾಗಿದೆ.
ಡಾ. ಅನುಪಮಾರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ವೃತ್ತಿಯಲ್ಲಿ ವೈದ್ಯರು. ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಅಭಿರುಚಿಯುಳ್ಳವರು. ಕಥಾಸಂಕಲನ, ಕವನಸಂಕಲನ, ಕಾದಂಬರಿ, ಜೀವನಚರಿತ್ರೆ, ವೈದ್ಯಕೀಯ ಸಾಹಿತ್ಯ, ಪ್ರವಾಸಕಥನ, ಅನುವಾದ, ಸಂಪಾದಿತ ಕೃತಿಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಇವರ ೫೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ಹೊನ್ನಾವರ ತಾಲ್ಲೂಕು ಕವಲಕ್ಕಿ ಗ್ರಾಮದಲ್ಲಿ ಆಸ್ಪತ್ರೆ ತೆರೆದು ವೈದ್ಯರಾಗಿ ಜನಸೇವೆ ಸಲ್ಲಿಸುತ್ತಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರಾಗಿ, ಸಮಾಜಸೇವಾ ಸಂಘಟನೆಗಳ ಕಾರ್ಯಕರ್ತರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಹಿತ್ಯ ಹಾಗೂ ಸಮಾಜಸೇವೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಸಾಹಿತ್ಯ, ಧರ್ಮ, ಕಲೆ, ಸಂಸ್ಕೃತಿ ಕುರಿತಂತೆ ಪ್ರಕಟವಾಗುವ ಉತ್ತಮ ಕೃತಿಗೆ ಪ್ರತಿ ವರ್ಷವೂ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ನೀಡಲಾಗುತ್ತಿದೆ. ೧೯೮೩ರಲ್ಲಿ ಪ್ರಾರಂಭವಾದ ಈ ಪ್ರಶಸ್ತಿಯನ್ನು ಇದುವರೆಗೆ ೩೪ ಕೃತಿಗಳಿಗೆ ನೀಡಲಾಗಿದೆ. ಪುರಸ್ಕೃತರಿಗೆ ಪ್ರಶಸ್ತಿಫಲಕ, ಸ್ವಸ್ತಿವಾಚನ, ಫಲತಾಂಬೂಲ ಹಾಗೂ ೨೫,೦೦೦ ರೂ.ಗಳ ಗೌರವಧನವನ್ನು ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.