ಹೊಸದಿಲ್ಲಿ: ಚುನಾವಣಾ ಬಾಂಡ್, ಕಂಪನಿಯ ರಕ್ಷಣೆಗೆ ದೇಣಿಗೆ ಕೇಳುವುದು, ಕಿಕ್ಬ್ಯಾಕ್ ಪಡೆಯುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ದುರುಪಯೋಗದಂಥ ಬಿಜೆಪಿಯ ಭ್ರಷ್ಟ ತಂತ್ರಗಾರಿಕೆಯನ್ನು ಬಯಲುಗೊಳಿಸಿದೆ ಎಂದು ಕಾಂಗ್ರೆಸ್ ಪಕ್ಷ ಇಂದು ಶುಕ್ರವಾರ ಆಪಾದಿಸಿದೆ.
ಕಾಂಗ್ರೆಸ್ ಪಕ್ಷ ವಿಶಿಷ್ಟ ಬಾಂಡ್ ಐಡಿ ಸಂಖ್ಯೆಗಳನ್ನು ಬಹಿರಂಗಪಡಿಸುವಂತೆ ಕೂಡಾ ಆಗ್ರಹ ಮುಂದುವರಿಸುತ್ತದೆ. ಇದರಿಂದ ಯಾವ ದಾನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವುದು ಕೂಡಾ ತಿಳಿಯುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಚುನಾವಣಾ ಬಾಂಡ್ಗಳ ಕ್ಷಿಪ್ರ ಹಾಗೂ ಪ್ರಥಮ ವಿಶ್ಲೇಷಣೆ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಅವರು ವಿವರ ನೀಡಿದ್ದಾರೆ. ಚುನಾವಣೆ ಮುಗಿಯುವವರೆಗೂ ವಿವರ ಬಹಿರಂಗಪಡಿಸುವುದನ್ನು ಮುಂದೂಡುವ ಸತತ ಪ್ರಯತ್ನದ ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಸ್ಬಿಐ ವಿವರಗಳನ್ನು ಬಹಿರಂಗಪಡಿಸಿದೆ.
೧೩೦೦ಕ್ಕೂ ಅಧಿಕ ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ನೀಡಿದ್ದು, ಬಿಜೆಪಿ ೨೦೧೯ರ ಬಳಿಕ ೬೦೦೦ ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿದೆ. ಚುನಾವಣಾ ಬಾಂಡ್ಗಳ ವಿವರಗಳು ಸದ್ಯಕ್ಕೆ ಬಿಜೆಪಿಯ ನಾಲ್ಕು ತಂತ್ರಗಳನ್ನು ಬಯಲುಗೊಳಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.