ಹಾಸನ (ಸಕಲೇಶಪುರ) : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ನೂರು ಅಡಿ ಎತ್ತರಕ್ಕೆ ನೀರು ಚಿಮ್ಮಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ.
ಪೈಪ್ಲೈನ್ ಸ್ಫೋಟಗೊಂಡ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಸ್ಫೋಟದ ಬಳಿಕ ಅಪಾರ ಪ್ರಮಾಣದ ನೀರು ರಭಸವಾಗಿ ಹೊರಬಂದು ಆಕಾಶದತ್ತ ಚಿಮ್ಮಿದ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೈಪ್ನಿಂದ ಹೊರಬಂದ ನೀರು ಸಮೀಪದ ತೋಟಗಳು ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದೆ. ನೀರಿನ ರಭಸದಿಂದ ಕೆಲವು ಭಾಗಗಳಲ್ಲಿ ಮಣ್ಣು ಕೊಚ್ಚಿ ಹೋಗಿರುವ ಸಾಧ್ಯತೆ ಇದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೂ ಎತ್ತಿನಹೊಳೆ ಯೋಜನೆಯ ಕಾಮಗಾರಿ ಇನ್ನೂ ಸಂಪೂರ್ಣಗೊಂಡಿಲ್ಲದಿರುವ ನಡುವೆಯೇ ಪೈಪ್ಲೈನ್ ಸ್ಫೋಟಗೊಂಡಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯೋಜನೆಯ ವಿವಿಧ ಭಾಗಗಳಲ್ಲಿ ಈ ಹಿಂದೆ ಕೂಡ ಪೈಪ್ಲೈನ್ ಸೋರಿಕೆ ಹಾಗೂ ತಾಂತ್ರಿಕ ದೋಷಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು. ಘಟನೆಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಫೋಟಕ್ಕೆ ನಿಖರ ಕಾರಣವನ್ನು ಬಹಿರಂಗಪಡಿಸಬೇಕಿದೆ.



