ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಮೈಸೂರು ನಗರವನ್ನು ಹೆಚ್ಚು ಅಭಿವೃದ್ಧಿ ನಮ್ಮ ತಂದೆ ಸಿಎಂ ಸಿದ್ಧರಾಮಯ್ಯ ಅವರು ಮಾಡಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆ ದುರಹಂಕಾರದ ಪರಮಾವಧಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯ ಅವರು ನಾನೇ ಡಿ.ದೇವರಾಜ ಅರಸುಗಿಂತ ದೊಡ್ಡವನು ಎನ್ನುತ್ತಾರೆ, ಮಗ ಯತೀಂದ್ರ ಮೈಸೂರು ಮಹಾರಾಜರಿಗಿಂತ ದೊಡ್ಡವರು ಎನ್ಮುತ್ತಾರೆ. ಇದೊಂತರ ವಂಶ ಪಾರಂಪರ್ಯದಲ್ಲಿ ದುರಹಂಕಾರ ಹರಿದುಕೊಂಡು ಬಂದಿದೆ ಎಂದು ಕಿಡಿಕಾರಿದರು. ಸಿದ್ಧರಾಮಯ್ಯ ನಾನೇ ಮಾಜಿ ಸಿಎಂ ಡಿ.ದೇವರಾಜ ಅರಸುಗಿಂತ ದೊಡ್ಡವನು ಅವರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ. ೫ ಕೆ.ಜಿ. ಅಕ್ಕಿ ಕೊಟ್ಟಾಕ್ಷಣ ದೇವರಾಜ ಅರಸು ಆಗಲು ಸಾಧ್ಯವೆ? ದೇವರಾಜ ಅರಸು ಅವರು ೨೧ ಲಕ್ಷ ಹೆಕ್ಟೇರ್ ಭೂಮಿ ಕೊಟ್ಟಿದ್ದಾರೆ. ಸಿದ್ಧರಾಮಯ್ಯ ಮತ್ತು ಅವರ ಮಗ ಮನುಷ್ಯ ದ್ವೇಷದ ತರಹ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತೀಂದ್ರ ನೀನು ಇನ್ನೂ ಎಂ.ಎಲ್.ಸಿ. ಆಗಿದ್ದೀಯ ಇನ್ನೂ ಬೆಳಿಬೇಕು. ಈಗಲೇ ಹುಚ್ಚರ ತರಹ ಹೇಳಿಕೆ ನೀಡಬೇಡ. ನೀನಾಗಲಿ ಸಿದ್ಧರಾಮಯ್ಯ ಅವರಗಾಲಿ ಡಿ.ದೇವರಾಜ ಅರಸು, ನಾಲ್ವಡಿ ಅವರಿಗೆ ಸಮ ಇಲ್ಲ. ಅವರಿಗಿಂತ ಬಹಳ ಕೆಳಗೆ ಇದ್ದೀರ. ಹೋಗಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣವರಿಗೂ ನೀವು ಸಮ ಇಲ್ಲ ಎಂದು ಹರಿಹಾಯ್ದರು.
ಮೈಸೂರು ಮಹಾರಾಜರ ಕೊಡುಗೆ ಬಹಳಷ್ಟಿದೆ. ಬಡವರಿಗೆ ಭೂಮಿ ಕೊಟ್ಟಿದ್ದಾರೆ. ಅಕ್ಷರ, ಅನ್ನ, ಆರೋಗ್ಯ ಕೊಟ್ಟಿದ್ದಾರೆ. ನೀವೆನು ಕೊಟ್ಟಿದ್ದೀರಿ ಎಂದು ಹೇಳಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಂತಹ ಆಡಳಿತ ಇಡೀ ಭಾರತದಲ್ಲಿ ಯಾವ ರಾಜಕಾರಣಿಯೂ ಕೊಟ್ಟಿಲ್ಲ ಎಂದು ಹೇಳಿದರು. ಕರ್ನಾಟದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ಭಾರತದ ಚುನಾವಣೆಯಲ್ಲಿ ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ಚುನಾವಣೆವರೆಗೂ ಅಕ್ರಮಗಳು ನಡೆಯುತ್ತಲೇ ಬಂದಿವೆ. ಕೆಲವು ಸಂದರ್ಭದಲ್ಲಿ ನಮಗೆ ಬೇಡದವರನ್ನು ತೆಗೆದು ಹಾಕಿ ಬೇಕಾದವರನ್ನು ಸೇರ್ಪಡೆ ಮಾಡಿಕೊಂಡಿಲ್ಲವೆ ಎಂದು ಹೇಳಿದರು.